ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಇಲ್ಲ ಅಂದ್ರೆ ಶಿವಮೊಗ್ಗದಲ್ಲಿ ದಿನ ಗೋಲಿಬಾರ್, ಕರ್ಫ್ಯೂ ನೋಡಬೇಕಾಗುತ್ತೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಸ್ನೇಹಮಿಲನ ಸಭೆಯಲ್ಲಿ ಮಾತನಾಡಿ, ನಾನು ಅಯೋಧ್ಯೆಯ ಹೋರಾಟದಲ್ಲಿ ಬದುಕಿ ಬಂದಿದ್ದೇನೆ. ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎಂದು ತಿಳಿಸಿದರು.
ಯಾರು ಪಾಕಿಸ್ತಾನ್ ಜಿಂದಾಬಾದ್ ಅನ್ನುತ್ತಿದ್ದಾರೋ, ಅವರಿಗೂ ಭಾರತ್ ಮಾ ತಾಕೀ ಜೈ ಅನ್ನಿಸಬೇಕು. ಹಾಗಾಗಿ, ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಮೋದಿ ಇಲ್ಲ ಅಂದ್ರೆ ಶಿವಮೊಗ್ಗದಲ್ಲಿ ದಿನ ಗೋಲಿಬಾರ್, ಕರ್ಫ್ಯೂ ನೋಡಬೇಕಾಗುತ್ತೆ. ದೇಶದ ಭವಿಷ್ಯಕ್ಕಾಗಿ ಈ ಚುನಾವಣೆ ಎಂದು ಹೇಳಿದರು.
ಸತ್ತ ಸರ್ಕಾರ ಇದು, ಏನು ಮಾಡಲಿಲ್ಲ
ಕರ್ನಾಟಕದ ಹೃದಯ ವಿಧಾನಸೌಧ. ಅಂತಹ ಜಾಗದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೆ. ಸತ್ತ ಸರ್ಕಾರ ಇದು ಏನು ಮಾಡಲಿಲ್ಲ. ಪ್ರತಿಭಟನೆ ಮಾಡಿದ ಮೇಲೆ ಆರೋಪಿಗಳನ್ನು ಬಂಧಿಸಿದರು. ಇಲ್ಲ ಬಿರಿಯಾನಿ ಕೊಟ್ಟು ಕಳಿಸುತ್ತಿದ್ದರು. ಹೆಚ್ಚು ತೆರಿಗೆ ಕಟ್ಟುತ್ತಿರೋದು ಬೆಂಗಳೂರು. ನಾಳೆ ಬೆಂಗಳೂರಿನವರು ನಮ್ಮ ತೆರಿಗೆ ನಮಗೆ ಅಂದ್ರೆ ಏನು ಮಾಡೋದು? ಎಂದು ಕಾಂಗ್ರೆಸ್ ಸರ್ಕಾರದ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ನಾಲಾಯಕ್
ಈ ಸರ್ಕಾರಕ್ಕೆ ಕಾಮನ್ಸೆನ್ಸ್ ಇಲ್ಲ. ಅಮೂಲ್ ಬೇಬಿ ಅಂತ ನಾನು ಹೇಳುತ್ತಿಲ್ಲ. ಅವರದೇ ಸ್ನೇಹಿತರಾಗಿರುವ ಕೇರಳದವರು ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ನಾಲಾಯಕ್ ಅಂತ ಅವರದ್ದೆ ಪಕ್ಷದವರೇ ಹೇಳುತ್ತಿದ್ದಾರೆ. ನಮ್ಮ ಕ್ಯಾಪ್ಟನ್ ಮೋದಿ, ನಿಮ್ಮ ಕ್ಯಾಪ್ಟನ್ ಯಾರು ಹೇಳಿ? ಯುದ್ದ ಮಾಡಲು ಸಹ ಒಬ್ಬ ಸೇನಾನಿ ಬೇಕು. ನೋ ಕ್ಯಾಪ್ಟನ್ ಹೆಂಗೆ ಆಟ ಆಡುತ್ತಿರಾ? ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದರು.