ಸುರಪುರ : ನಾನು ನನ್ನ ಹೊಲಕ್ಕೆ ನೀರು ಕೇಳಿಲ್ಲ, ನನ್ನ ರೈತರ ಹೊಲಕ್ಕೆ ನೀರು ಕೇಳಿದ್ದು. ನಾರಾಯಣಪುರ ಡ್ಯಾಂ ಇರೋದು ಕನಕಪುರದಲ್ಲಿ ಅಲ್ಲ, ಆ ಡ್ಯಾಂ ಇರೋದು ಸುರಪುರದಲ್ಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜುಗೌಡ ಕಿಡಿಕಾರಿದರು.
ಪವರ್ ಟಿವಿಯೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ನೀರಾವರಿ ವಿಷಯ ಪ್ರಸ್ತಾಪಿಸಿ ಮತಯಾಚನೆ ಮಾಡಿದರು. ನಮ್ಮ ರೈತರಿಗೆ ನೀರು ಬಿಡಲ್ಲ ಅಂತ ಹೇಳಿದ್ದಾನೆ ಡಿ.ಕೆ. ಶಿವಕುಮಾರ್. ನಾನು ಗೆದ್ದು ರೈತರಿಗೆ ನೀರು ಬಿಡಿಸ್ತೀನಿ ಎಂದು ಸವಾಲ್ ಹಾಕಿದರು.
ನಾನು ಸೋತು ಮನೆಯಲ್ಲಿ ಕುಳಿತಿರಬಹುದು. ಆದ್ರೆ, ಬಿ.ವೈ. ವಿಜಯೇಂದ್ರ ಹಾಗೂ ನಾನು ಸುಮ್ಮನೆ ಕುಳಿತಿಲ್ಲ. ರಾಜುಗೌಡ ಪ್ರೀತಿಯಿಂದ ಪ್ರೀತಿಗಾಗಿ ಅಂಜುತಾನೆ. ಆದ್ರೆ, ಧಮ್ಕಿ ಹಾಕಿದ್ರೆ ಅಂಜುವ ಪ್ರಶ್ನೆಯಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾತಿಗೆ ತಿರುಗೇಟು ಕೊಟ್ಟರು.
ಸಿಡಿ ಮಾಡೋದ್ರಲ್ಲಿ ಎಕ್ಸ್ಫರ್ಟ್ ಇದಾನೆ
ರಾಜುಗೌಡ ಕ್ರಿಕೆಟ್, ಕಬಡ್ಡಿ ಆಟ ಆಡ್ತಾನೆ ಅಂತ ಡಿಸಿಎಂ ಹೇಳ್ತಾರೆ. ಆದ್ರೆ, ನಾನು ಓಪನ್ ಗ್ರೌಂಡ್ನಲ್ಲಿ ಕ್ರಿಕೆಟ್, ಕಬಡ್ಡಿ ಆಡ್ತೀನಿ. ಇನ್ನೂ ಕೆಲವರು ಇಂಡೋರ್ ಗ್ರೌಂಡ್ನಲ್ಲಿ ಆಟ ಆಡ್ತಾರೆ. ಸಿದ್ರಾಮಣ್ಣ. ಇಂತವರನ್ನು ಬಾಜು ಇಟ್ಟುಕೊಂಡು ಅಡ್ಡಾಡಬೇಡ್ರಿ. ಅವರು ಸಿಡಿ ಮಾಡೋದ್ರಲ್ಲಿ ಎಕ್ಸ್ಫರ್ಟ್ ಇದಾನೆ. ತುಂಬಾ ಹುಷಾರು ಸಿದ್ರಾಮಣ್ಣ. ನಿಮಗೆ ಬಯ್ಯೋಕೆ ಮನಸ್ಸಿಲ್ಲ ಅಣ್ಣ ಎಂದು ರಾಜುಗೌಡ ಆಕ್ರೋಶ ಹೊರಹಾಕಿದರು.
ಸುರಪುರದಲ್ಲಿ ರಾಜುಗೌಡ ಗೆಲ್ಲಬೇಕು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಡಿ.ಕೆ. ಶಿವಕುಮಾರ್ ಭದ್ರ ಕೋಟೆ ಪುಡಿ ಪುಡಿಯಾಗಿ ಕಮಲ ಅರಳುತ್ತದೆ. ಫಲಿತಾಂಶದ ದಿನ ಡಿ.ಕೆ. ಶಿವಕುಮಾರ್ ಆರ್ಭಟಕ್ಕೆ ಬ್ರೇಕ್ ಬೀಳುತ್ತದೆ. ಸುರಪುರದ ರೈತರಿಗೆ ನೀರು ಕೊಡಬೇಕಾದದ್ದು ಸರ್ಕಾರದ ಕರ್ತವ್ಯ. ಈಗ ರಾಜ್ಯದಲ್ಲಿ ರೈತ ವಿರೋಧಿ ಸರ್ಕಾರ ಇದೆ. ಅದಕ್ಕೆ ಬಲಿಷ್ಠ ಜನ ನಾಯಕ ಬೇಕು. ಅದಕ್ಕೆ ಸುರಪುರದಲ್ಲಿ ರಾಜುಗೌಡ ಗೆಲ್ಲಬೇಕು ಎಂದು ಹೇಳಿದರು.