ಬೆಂಗಳೂರು : ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಿದ್ದಾರೆ ಎಂದು ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 18 ಸಾವಿರ ಕೋಟಿ ಕೇಳಿದ್ವಿ. ಮೂರು ಸಾವಿರ ಚಿಲ್ಲರೆ ಕೊಟ್ಟಿದ್ದಾರೆ. ಆನೆಗೆ ಮಜ್ಜಿಗೆ ಅನ್ನೋ ತರ. ಕನಿಷ್ಟ ಪಕ್ಷ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
ನಮಗೆ ಕೊಡಬೇಕಾದ ಪಾಲು ಸರಿಯಾಗಿ ಕೊಟ್ಟಿಲ್ಲ. ಹೋರಾಟವನ್ನ ನಾವು ಮುಂದುವರೆಸುತ್ತೇವೆ. ಬರಗಾಲದಲ್ಲಿ ರಾಜಕೀಯ ಮಾಡೋದು ಬೇಡ. ಬಿಜೆಪಿ ನಾಯಕರಿಗೆ ನಾನು ಮನವಿ ಮಾಡ್ತೀನಿ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡ್ತಾ ಇದ್ದೇವೆ. ನಮಗೆ ನ್ಯಾಯ ಸಿಗಬೇಕು. ಬಿಜೆಪಿ ನಾಯಕರು ರಾಜ್ಯದ ಬಗ್ಗೆ ಅಭಿಮಾನ ಇದ್ದರೆ, ಒಕ್ಕೊರಲಿನಿಂದ ನೀವು ಮನವಿ ಮಾಡಿ ಎಂದು ತಿಳಿಸಿದ್ದಾರೆ.
15 ಸಾವಿರ ಕೋಟಿ ಕೊಡಬೇಕು
ಮೊದಲ ಹಂತದ ಚುನಾವಣೆ ಬಳಿಕ ಬರ ಪರಿಹಾರ ಬಿಡುಗಡೆ ವಿಚಾರವಾಗಿ ಮಾತನಾಡಿ, ಅವರಿಗೆ ಜನ ವಿರುದ್ಧವಾಗಿದ್ದಾರೆ ಅಂತ ಗೊತ್ತಾಗಿದೆ. ಅದಕ್ಕೆ ಪರಿಹಾರ ಬಿಡುಗಡೆ ಮಾಡಿದ್ದಾರೆ. ಮುಂದೆಯಾದರೂ ಸರಿ ಮಾಡಿಕೊಳ್ಳಿ. ಈಗ ಕೊಟ್ಟಿರುವ ಹಣ ಸಾಕಾಗಲ್ಲ. 15 ಸಾವಿರ ಕೋಟಿಯಾದರೂ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ನಮಗೆ ಡಬ್ಬಲ್ ಡಿಜಿಟ್ ಬರುತ್ತದೆ
ಮೊದಲ ಹಂತದ ಮತದಾನ ವಿಚಾರ ಕುರಿತು ಮಾತನಾಡಿ, ಮಂಡ್ಯ, ಮೈಸೂರು, ಹಾಸನ, ಕೋಲಾರ, ಬೆಂಗಳೂರು ಸೇರಿ ಅನೇಕ ಕಡೆ ಮತದಾನ ಯಶಸ್ವಿಯಾಗಿದೆ. ಖಂಡಿತ ನಮಗೆ ಡಬ್ಬಲ್ ಡಿಜಿಟ್ ಬರುತ್ತದೆ. ನಮಗೆ ವಿಶ್ವಾಸ ಇದೆ. ಇಲ್ಲ ಅಂದ್ರೆ ಇವರು ಹಣ ಬಿಡುಗಡೆ ಮಾಡ್ತಾ ಇದ್ರಾ? ಅವರಿಗೆ ರಿಪೋರ್ಟ್ ಬಂದಿದೆ, ಅದಕ್ಕೆ ಬಿಡುಗಡೆ ಮಾಡಿದ್ದಾರೆ ಎಂದು ಚಾಟಿ ಬೀಸಿದ್ದಾರೆ.
ಈಗ ಫ್ರೀಯಾಗಿದ್ದಾರೆ, ಮಾತನಾಡಲಿ
ಡಾ. ಮಂಜುನಾಥ್ ಕಣಕ್ಕೆ ಇಳಿಸಿರುವ ಬಗ್ಗೆ ಹೆ.ಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಹಳ ಸಂತೋಷ. ಲೇಟ್ ಮಾಡೋದು ಬೇಡ, ಈಗಲೇ ಮಾತಾಡಲಿ. ಈಗ ಫ್ರೀಯಾಗಿದ್ದಾರೆ, ಮಾತನಾಡಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.