ಹುಬ್ಬಳ್ಳಿ : ನನ್ನ ಮಗಳು ನೇಹಾಳನ್ನು ಅಪಹರಿಸಲು ಆರೋಪಿ ಫಯಾಜ್ ಯತ್ನಿಸಿದ್ದ ಎಂದು ನೇಹಾ ತಂದೆ ನಿರಂಜನ ಹಿರೇಮಠ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತಂಡದಿಂದ ನೇಹಾ ತಂದೆ ನಿರಂಜನ ಹಾಗೂ ತಾಯಿ ಗೀತಾ ವಿಚಾರಣೆ ನಡೆಯಿತು. ಬಳಿಕ ನಿರಂಜನ ಹಿರೇಮಠ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲ ವಿಷಯಗಳನ್ನು ಸಿಐಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಿನ್ನೆ ಫಯಾಜ್ನನ್ನು ಮಹಜರು ಮಾಡಿರುವ ಬಗ್ಗೆಯೂ ಅವರು ತಿಳಿಸಿದರು. ಹಂತಕ ಫಯಾಜ್ ನನ್ನ ಮಗಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ. ಕೆಲ ದಿನಗಳಿಂದ ನಮಗೆ ಬೆದರಿಕೆ ಇದೆ. ಯಾರು ಯಾರೋ ಮನೆಗೆ ಬಂದು ವಿಡಿಯೋ ಮಾಡುತ್ತಿದ್ದಾರೆ. ಕೆಲ ದಿನಗಳಿಂದ ಅನಾಮಿಕರು ಮನೆ ಸುತ್ತಮುತ್ತ ಒಡಾಡುತ್ತಿದ್ದಾರೆ. ಇದನ್ನು ಸಿಐಡಿ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದ್ದಾರೆ.
ಫಯಾಜ್ ಪ್ರಾಣ ತೆಗೆದುಕೊಳ್ಳುತ್ತೇನೆ
ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಫಯಾಜ್ ಪ್ರಾಣ ತೆಗೆದುಕೊಳ್ಳುತ್ತೇನೆ. ನನ್ನ ಮಗಳ ಶವದ ಮೇಲೆ ನಾನು ಶಪಥ ಮಾಡಿದ್ದೇನೆ. ಆರೋಪಿ ಫಯಾಜ್ಗೆ ಸಹಾಯ ಮಾಡಿದವರನ್ನೂ ಬಂಧಿಸಬೇಕು ಎಂದು ನಿರಂಜನ ಹಿರೇಮಠ ಆಗ್ರಹಿಸಿದ್ದಾರೆ.
ದಿನಕ್ಕೊಂದು ತಿರುವು ಪಡೆಯುತ್ತಿದೆ
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ರಾಜ್ಯದಾದ್ಯಂತ ಸಂಚಲನ ಮೂಡಿಸಿತ್ತು. ಬಳಿಕ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಕೊಲೆ ದಿಢೀರಾಗಿ ಸಂಭವಿಸಿದ್ದಲ್ಲ. ಆರೋಪಿ ಫಯಾಜ್ ವಾರದ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ನೇಹಾಳನ್ನು ಅಪಹರಿಸಲು ಫಯಾಜ್ ಯತ್ನಿಸಿದ್ದ ಎಂದು ಆಕೆಯ ತಂದೆಯೇ ಹೇಳಿದ್ದಾರೆ.