ಬೆಂಗಳೂರು : ಪ್ರಜ್ವಲ್ ರೇವಣ್ಣ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ರಾಜಕೀಯ ಜಟಾಪಟಿಗೂ ಇದು ಕಾರಣವಾಗಿದೆ. ಇದೆಲ್ಲದರ ಮಧ್ಯೆ, ಹೊಸದೊಂದು ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ. ಒಕ್ಕಲಿಗ ನಾಯಕತ್ವಕ್ಕಾಗಿಯೇ ಇಷ್ಟೆಲ್ಲ ನಡೀತಾ ಇದೆ ಅನ್ನೋದು ಸದ್ಯಕ್ಕಿರೋ ಲೇಟೆಸ್ಟ್ ಸುದ್ದಿ!
ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಚುರುಕುಗೊಂಡಿದೆ. ರೇವಣ್ಣ, ಪ್ರಜ್ವಲ್ ರೇವಣ್ಣ ಇಬ್ಬರಿಗೂ ಲುಕ್ ಔಟ್ ನೋಟಿಸ್ ನೀಡಲಾಗಿದೆ. ಇತ್ತ ರೇವಣ್ಣರ ಬಂಧನವೂ ಆಗಿದೆ. ಈ ಮಧ್ಯೆ ಒಕ್ಕಲಿಗ ನಾಯಕತ್ವಕ್ಕಾಗಿಯೇ ಈ ವಿಡಿಯೋ ಪ್ರಕರಣ ಇಷ್ಟೊಂದು ಹೈಪ್ ಪಡೆಯುತ್ತಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಲಿಂಗಾಯತ ಸಮುದಾಯದಂತೆ ಒಕ್ಕಲಿಗ ಸಮುದಾಯ ಕೂಡ ದೊಡ್ಡದಿದೆ. ಈಗಾಗಲೇ ಕುಮಾರಸ್ವಾಮಿ ಒಕ್ಕಲಿಗ ನಾಯಕ ಅನ್ನೋ ಪಟ್ಟ ಪಡೆದಿದ್ದಾರೆ. ಡಿಕೆಶಿ ಕೂಡ ಒಕ್ಕಲಿಗ ನಾಯಕ ಅಂದರೂ ಆ ಮಟ್ಟಿಗೆ ಇನ್ನೂ ಜನಪ್ರಿಯತೆ ಪಡೆಯಲು ಸಾಧ್ಯವಾಗ್ತಾ ಇಲ್ಲ. ಹೊಸ ವಿಷಯ ಏನಪ್ಪಾ ಅಂದ್ರೆ, ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಒಕ್ಕಲಿಗ ನಾಯಕತ್ವದ ವಿಚಾರ ತಳಕು ಹಾಕಿಕೊಂಡಿದೆ. ವಕೀಲ ದೇವರಾಜೇಗೌಡ ಹೇಳಿಕೆ ಪ್ರಕಾರ, ನಾಯಕತ್ವದ ವಿಚಾರಕ್ಕಾಗಿಯೇ ಇಷ್ಟೆಲ್ಲಾ ಅವಾಂತರ ನಡೆದಿದೆ ಎಂದು ಹೇಳುತ್ತಿದ್ದಾರೆ.
ನನಗೆ ಯಾವುದೇ ಒಕ್ಕಲಿಗ ನಾಯಕನ ಪಟ್ಟ ಬೇಡ
ಇನ್ನು ಒಂದು ವಾರದ ಒಳಗಾಗಿ ಈ ಒಕ್ಕಲಿಗ ವಿಚಾರವಾಗಿ ಕುಮಾರಸ್ವಾಮಿ ನಿರ್ಧಾರ ತೆಗೆದುಕೊಳ್ಳುವವರಿದ್ದಾರೆ ಅನ್ನೋ ದೇವರಾಜೇಗೌಡ ಮಾತು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅದೆಲ್ಲ ಬಿಜೆಪಿಯವರು ಕ್ರಿಯೆಟ್ ಮಾಡಿದ್ದಾರೆ ಎಂದು ತಳ್ಳಿ ಹಾಕಿದ್ದಾರೆ.
ಒಕ್ಕಲಿಗ ನಾಯಕ ಅಂತ ಹೇಳಿಕೊಳ್ಳಲು ಇಷ್ಟವಿಲ್ಲ
ನನಗೆ ಯಾವ ನಾಯಕತ್ವವೂ ಬೇಡ. ನನಗೆ ಕಾಂಗ್ರೆಸ್ ನಾಯಕನಾಗಿ 4 ವರ್ಷದಿಂದ ಆಯ್ಕೆ ಮಾಡಿದೆ. ನಾನು ಕಾಂಗ್ರೆಸ್ ಪಕ್ಷದ ಒಬ್ಬ ಅಧ್ಯಕ್ಷ. ಬಿಜೆಪಿಯವರು ಗಂಟೆಗೊಂದು, ಘಳಿಗೆಗೊಂದು ಮಾತನಾಡುತ್ತಾರೆ. ದಳದವರೂ ಮಾತನಾಡುತ್ತಾರೆ. ನಾನು ಒಕ್ಕಲಿಗ ನಾಯಕ ಅಂತ ಹೇಳಿಕೊಳ್ಳೋಕೂ ಇಷ್ಟ ಇಲ್ಲ. ಒಕ್ಕಲಿಗ ನಾಯಕನಾಗಿ ಹುಟ್ಟಿದ್ದೀನಿ, ಆ ಸಮಾಜಕ್ಕೆ ಗೌರವ ಕೊಡಬೇಕು, ರಕ್ಷಣೆ ಕೊಡಬೇಕು, ಸಹಾಯ ಮಾಡಬೇಕು ಮಾಡ್ತೀನಿ. ಖಂಡಿತವಾಗಿಯೂ ನನ್ನ ಕೈಲಾದ ಸೇವೆಯನ್ನ ಸಮಾಜಕ್ಕೆ ಮಾಡ್ತೀನಿ ಎಂದು ತಿಳಿಸಿದ್ದಾರೆ.
ಒಟ್ನಲ್ಲಿ, ಈ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿ ಹೆಣ್ಣು ಮಕ್ಕಳ ಮಾನ ಹರಾಜಾಗೋದ್ರಿಂದ ಶುರುವಾಗಿ ಒಕ್ಕಲಿಗ ನಾಯಕತ್ವದ ಜಟಾಪಟಿ ವರೆಗೆ ಬಂದು ನಿಂತಿದೆ. ಇದು ಇನ್ನೆಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ.