ಚಂಡೀಗಢ: ಪಂಜಾಬ್ ನ ಫೊರೋಜ್ಪುರದ ಗುರುದ್ವಾರದಲ್ಲಿ ಸಿಖ್ ಧರ್ಮದ ಪವಿತ್ರ ಗ್ರಂಥ “ಗುರು ಗ್ರಂಥ ಸಾಹೀಬ್” ನ ಕೆಲ ಪುಟಗಳನ್ನು ಹರಿದು ಹಾಕಿದ ಕಾರಣಕ್ಕೆ ಆಕ್ರೋಶಗೊಂಡ ಸಮುದಾಯದವರು ಯುವಕನ್ನು ಹೊಡೆದು ಕೊಂದು ಹಾಕಿರುವ ಘಟನೆ ನಡೆದಿದೆ.
ಬಕ್ಷೀಶ್ ಸಿಂಗ್ ಮೃತ ಯುವಕ, “ಗುರು ಗ್ರಂಥ ಸಾಹೀಬ್” ಹರಿದು ಹಾಕಿದ್ದಕ್ಕೆ ಕೋಪಗೊಂಡ ಆತನನ್ನು ಅಲ್ಲಿದ್ದ ಜನರು ಹಿಡಿದು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠ ಸಿಂಗ್ ಸುಖವಿಂದರ್ ಸಿಂಗ್ ಹೇಳಿದ್ದಾರೆ.
ಮೃತಪಟ್ಟ ಯುವಕ ಮಾನಸಿಕ ಅಸ್ವಸ್ಥನಾಗಿದ್ದು ಎರಡು ವರ್ಷಗಳಿಂದ ಔಷಧಿ ಸೇವಿಸುತ್ತಿದ್ದ ಎಂದು ಆತನ ತಂದೆ ಲಖ್ವಿಂದರ್ ಸಿಂಗ್ ಹೇಳಿದ್ದಾರೆ. ಈಗ ಮಗನನ್ನು ಹತ್ಯೆಗೈದವರ ವಿರುದ್ಧ ಪ್ರಕರಣ ದಾಖಲಿಸುವಂತೆ ತಂದೆ ದೂರು ನೀಡಿದ್ದಾರೆ.
ಜನರು ಥಳಿಸಲು ಆರಂಭಿಸಿದಾಗ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. “ಗುರು ಗ್ರಂಥ ಸಾಹೀಬ್” ಹರಿದು ಹಾಕಿದ ವಿಚಾರ ತಿಳಿದು ಗ್ರಾಮಸ್ಥರು ಗುರುದ್ವಾರದಲ್ಲಿ ಜಮಾಯಿಸಿ ಥಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.