ಉಡುಪಿ : ನಟ ದರ್ಶನ್ ಅವರು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ವಿಚಾರಕ್ಕೆ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಪರ ಪ್ರಚಾರ ಮಾಡಬೇಕು ಎನ್ನುವುದು ಅವರವರ ಇಚ್ಛೆ. ದರ್ಶನ್ ತಮಗಿಷ್ಟವಾದವರ ಪರ ಪ್ರಚಾರ ಮಾಡಿದರೆ ನಾನೇಕೆ ಪ್ರಶ್ನಿಸಲಿ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಆ ಪಕ್ಷಕ್ಕೆ ಹೋಗು ಅಥವಾ ಬೇಡ ಎನ್ನುವುದಕ್ಕೆ ನಾನ್ಯಾರು? ನಾನು ಸ್ಪರ್ಧೆ ಮಾಡಿದ್ದರೆ ನನ್ನ ಪರ ದರ್ಶನ್ ಪ್ರಚಾರ ಮಾಡುತ್ತಿದ್ದರು. ಅವರನ್ನು ನಾನು ಪ್ರಚಾರಕ್ಕೆ ಕಳುಹಿಸುವುದಾದರೆ ನಾನೇಕೆ ಬಿಜೆಪಿ ಪಕ್ಷಕ್ಕೆ ಸೇರಬೇಕಿತ್ತು? ಎಂದು ತಿಳಿಸಿದ್ದಾರೆ.
ಉಡುಪಿಯ ಬ್ರಹ್ಮಾವರ ಉಪ್ಪೂರುನಲ್ಲಿ ಇಂದು ಬಿಜೆಪಿ ಮಹಿಳಾ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಕೇಂದ್ರ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ, ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಿದ್ದರು. ಮುಖ್ಯ ಅತಿಥಿಗಳು ಬರುವುದು ವಿಳಂಬವಾದ ಹಿನ್ನಲೆಯಲ್ಲಿ ಕೆಲವು ಕಾರ್ಯಕರ್ತರು ಸಮಾವೇಶ ಬಿಟ್ಟು ತೆರಳಿದ್ದಾರೆ.
ದರ್ಶನ್ ಪ್ರಚಾರ ಮಾಡಿದ್ದರಲ್ಲಿ ತಪ್ಪೇನಿಲ್ಲ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ (ಏ.18) ಪ್ರಚಾರ ನಡೆಸಿದ್ದರು. ಈ ಬಗ್ಗೆ ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಯಾರ ಪರ ಬೇಕಾದರೂ ಪ್ರಚಾರ ಮಾಡಬಹುದು. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡುವಂತದ್ದೇನು ಇಲ್ಲ ಎಂದು ತಿಳಿಸಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದ ಮಳವಳ್ಳಿಯಲ್ಲಿ ನನ್ನ ಪರ ಪ್ರಚಾರದಲ್ಲಿ ಭಾಗಿಯಾದರು. ಅವರಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳು. ಮಂಡ್ಯದ ಬಗ್ಗೆ ಅಪಾರ ಅಭಿಮಾನವನ್ನು ಇಟ್ಟುಕೊಂಡಿರುವ ನನ್ನ ಆತ್ಮೀಯರಾದ ದರ್ಶನ್ ಅವರ ಬೆಂಬಲದಿಂದ ಪ್ರಚಾರಕಾರ್ಯಕ್ಕೆ ಇನ್ನಷ್ಟು ಮೆರುಗು ಬಂದಿದೆ.#mandya #starchandru pic.twitter.com/hSKJIwHj5Y
— Venkataramane Gowda (@nimstarchandru) April 19, 2024