ದಾವಣಗೆರೆ : ರಾಜ್ಯದಲ್ಲಿ ಹಿಂದೂ ಯುವಕರ ಮೇಲೆ ಅನ್ಯಕೋಮಿನ ಯುವಕರ ಪುಂಡಾಟ ಹೆಚ್ಚಾಗುತ್ತಿದೆ. ಇಂತಹದ್ದೇ ಮತ್ತೊಂದು ಘಟನೆ ಬೆಣ್ಣೆ ನಗರಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಮೊನ್ನೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಮಾಡಲಾಗಿತ್ತು. ಮೋದಿ ಕುರಿತ ಹಾಡು ಬರೆದಿದ್ದಕ್ಕೆ ಮಂಡ್ಯದಲ್ಲಿ ಹಿಂದೂ ಯುವಕನಿಗೆ ಥಳಿಸಲಾಗಿದೆ. ಇತ್ತ, ದಾವಣಗೆರೆಯಲ್ಲಿ ಹಿಂದೂ ಯುವಕರಿಗೆ ಅನ್ಯಕೋಮಿನ ಯುವಕರು ಚಾಕು ಇರಿದಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಲ್ಲೂರು ಕ್ಯಾಂಪಿನಲ್ಲಿ ಈ ಘಟನೆ ನಡೆದಿದೆ. ಹಳೆ ವೈಷಮ್ಯ ಹಿನ್ನೆಲೆ ಅನ್ಯಕೋಮಿನ ಯುವಕರು ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ ಹನುಮಂತ ಮತ್ತು ಗೋಪಾಲ್ಗೆ ಚಾಕು ಹಿರಿದಿದ್ದು, ಆಕಾಶ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ.
ಗಾಯಾಳುಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಮನವಮಿಯ ರಾತ್ರಿ ಉರ್ದು ಶಾಲೆ ಬಳಿ ಕ್ಲುಲ್ಲಕ ಕಾರಣಕ್ಕೆ ಎರಡು ಕೋಮಗಳ ನಡುವೆ ಘರ್ಷಣೆ ಉಂಟಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಹಿಂದೂ ಯುವಕರಿಗೆ ಅನ್ಯಕೋಮಿನ ಯುವಕರು ಚಾಕುವಿನಿಂದ ಇರಿದಿದ್ದಾರೆ.
ಈ ಸಂಬಂಧ ಮುಹಿಜ್ ಇಸ್ಮಾಯಿಲ್ ಸೇರಿದಂತೆ 15 ಜನರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ನಲ್ಲೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.