Wednesday, May 1, 2024

ಯಡಿಯೂರಪ್ಪ ಮಗ ಇನ್ನೂ ಎಳಸು, ಸೊಕ್ಕಿನ ಮಾತಾಡ್ತಾನೆ : ಈಶ್ವರಪ್ಪ

ಶಿವಮೊಗ್ಗ : ಬಿಜೆಪಿಗೆ ಕಾಂಗ್ರೆಸ್ ಸಂಸ್ಕೃತಿ ಬಂದಿದೆ. ಕುಟುಂಬ ರಾಜಕಾರಣವೇ ಮುಖ್ಯವಾಗಿದೆ. ನನಗೆ ಯಡಿಯೂರಪ್ಪ ಆದರ್ಶವಲ್ಲ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಮತ್ತೊಮ್ಮೆ ಮತ್ತೊಮ್ಮೆ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿ, ಯಡಿಯೂರಪ್ಪ ಅವರ ಒಬ್ಬ ಪುತ್ರ ನನಗೆ ಈಶ್ವರಪ್ಪನವರ ಆಶೀರ್ವಾದ ಇದೇ ಎಂದರೆ, ಇನ್ನೊಬ್ಬ ಸೊಕ್ಕಿನ ಮಾತನಾಡುತ್ತಾನೆ. ಆತ ಇನ್ನೂ ಎಳಸು, ಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂದೇ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ನನಗೆ ಹೇಳುತ್ತಾನೆ. ಅವನು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಮತ್ತು ರಾಘವೇಂದ್ರ ಹಿಂದುತ್ವವನ್ನು ಬಿಟ್ಟುಬಿಟ್ಟಿದ್ದಾರೆ. ಅವರು ಜಾತಿಯ ಹಿಂದೆ ಬೆನ್ನತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಬಿಜೆಪಿ ಪಕ್ಷಕ್ಕೆ ಖಂಡಿತ ಉಳಿಗಾಲವಿಲ್ಲ. ಜಾತಿ ರಾಜಕಾರಣದ ಜೊತೆಗೆ ತಮಗೆ ಬೇಕಾದವರಿಗೆ ಮಾತ್ರ ಟಿಕೆಟ್ ಕೊಡಿಸಿದ್ದಾರೆ. ಈ ಅಪ್ಪ ಮಕ್ಕಳಿಂದಲೇ 108 ಸ್ಥಾನ ಗೆದ್ದಿದ್ದ ನಾವು 66ಕ್ಕೆ ಇಳಿಯಬೇಕಾಯಿತು ಎಂದು ಕಿಡಿಕಾರಿದ್ದಾರೆ.

ಮೋದಿನಾ ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ

ನಾನು 40 ವರ್ಷ ತಪ್ಪಸ್ಸು ಮಾಡಿದ್ದೇನೆ. ಹಿಂದುತ್ವ ಉಳಿವಿಗಾಗಿ ಹೋರಾಟ ಮಾಡಿದ್ದೇನೆ. ಮೋದಿಯವರನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಎಲ್ಲರ ನೋವಿನ ಪರವಾಗಿಯೇ ನಾನು ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ವಿರುದ್ಧ ಅದೇನು ಕ್ರಮ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ . ವಿಜಯೇಂದ್ರ ಇದೇ ರೀತಿ ಮುಂದುವರೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES