ಕೊಪ್ಪಳ : ಜನಾರ್ದನ ರೆಡ್ಡಿ ಪಾಪದ ಕೆಲಸಗಳಿಗೆ ಶಿಕ್ಷೆ ಆಗಬೇಕೆಂದು ಬಳ್ಳಾರಿಗೆ ಪಾದಯಾತ್ರೆ ಮಾಡಿ ಜೈಲಿಗೆ ಹೋಗುವಂತೆ ಮಾಡಿದ್ದೆ ಎಂದು ಜನಾರ್ದನ ರೆಡ್ಡಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೊಪ್ಪಳದ ಗಂಗಾವತಿಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮಾತು ಕೇಳಿ ಇಕ್ಬಾಲ್ ಅನ್ಸಾರಿ ಅವರನ್ನು ಸೋಲಿಸಿದ ನೀವು ನತದೃಷ್ಟರು ಎಂದು ಬೇಸರಿಸಿದರು.
ಬಳ್ಳಾರಿಯಿಂದ ಜನಾರ್ದನ ರೆಡ್ಡಿ ಎಂಎಲ್ಎ ಆಗಿದ್ದಾರೆ. ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಮಾಡಿದ ಅಪಕೀರ್ತಿ ಜನಾರ್ದನ ರೆಡ್ಡಿಗೆ ಇದೆ. ಇಕ್ಬಾಲ್ ಅನ್ಸಾರಿ ಗೆದ್ದಿದ್ದರೆ ಮಂತ್ರಿ ಆಗ್ತಿದ್ದರು. ಅನ್ಸಾರಿ ಸೋಲಿಸಿ ತಪ್ಪು ಮಾಡಿದ್ರಲ್ವಾ? ಈ ತಪ್ಪನ್ನು ಈ ಚುನಾವಣೆಯಲ್ಲಿ ಮಾಡಬಾರದು ಎಂದು ಹೇಳಿದರು.
ಜನಾರ್ದನ ರೆಡ್ಡಿ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ವೋಟ್ ಕೊಟ್ಟರು. ಸಚಿವ ಶಿವರಾಜ್ ತಂಗಡಗಿನೇ ಮಧ್ಯಸ್ಥಿಕೆ ವಹಿಸಿದ್ದರು. ಈಗ ಮತ್ತೆ ರೆಡ್ಡಿ ಬಿಜೆಪಿಗೆ ಹೋಗಿದ್ದಾರೆ. ಒಂದು ಪಕ್ಷಕ್ಕೆ ಬೆಂಬಲ ಕೊಡೋದು, ಇನ್ನೊಂದು ಪಕ್ಷಕ್ಕೆ ಹೋಗೋದು. ಇಂತವರನ್ನು ರಾಜಕಾರಣಲ್ಲಿ ಬೆಳೆಸಬಾರದು. ಅನ್ಸಾರಿ ಅವರನ್ನು ಸೋಲಿಸಿ ನಿಮಗೆ ನೀವೇ ಅನ್ಯಾಯ ಮಾಡಿಕೊಂಡ್ರಿ ಎಂದು ತಿಳಿಸಿದರು.
ನಿಮ್ಮ ಋಣ ಮರೆಯಲು ಎಂದಿಗೂ ಸಾಧ್ಯವಿಲ್ಲ
ಮುಂದೆ ಅನ್ಸಾರಿ ಅವರಿಗೆ ಭವಿಷ್ಯ ಇದೆ. ಅನ್ಸಾರಿ ಅವರಿಗೆ ಶಕ್ತಿ ಕೊಡುವ ಕೆಲಸವನ್ನು ಮಾಡಬೇಕು. ನಮ್ಮ ಅಭ್ಯರ್ಥಿಗೆ ಮತ ನೀಡಿ ಅನ್ಸಾರಿ ಅವರಿಗೆ ಶಕ್ತಿ ತುಂಬಬೇಕು. ನಾನು ಲೋಕಸಭೆಗೆ ನಿಂತಾಗ ನನಗೆ ಗಂಗಾವತಿಯಲ್ಲಿ ಲೀಡ್ ಕೊಟ್ಟಿದ್ದರು. ಆಗ ನನಗೆ ಪಕ್ಷ ಬೇಧ ಮರೆತು ಸಹಾಯ ಮಾಡಿದ್ದರು. ಗಂಗಾವತಿ ನನಗೆ ಮನೆ ಇದ್ದ ಹಾಗೆ. ಗಂಗಾವತಿ ಜನರು ಗೌರರವನ್ನು ಇಟ್ಟುಕೊಂಡಿದ್ದಾರೆ. ಮೈಸೂರಿನಿಂದ ಬಂದು ಲೋಕಸಭೆಗೆ ನಿಂತಾಗ ನನಗೆ ಆಶೀರ್ವಾದ ಮಾಡಿದ್ರಿ. ನಿಮ್ಮ ಋಣ ಮರೆಯಲು ಎಂದಿಗೂ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.