ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಖಾಸಗಿ ಕ್ಯಾಬ್ ಮತ್ತು ಟ್ಯಾಕ್ಸಿಗಳಿಗೆ ಪ್ರವೇಶ ದರ ನಿಗಧಿ ಮಾಡಲಾಗಿದೆ. ಬೆಂಗಳೂರು ಏರ್ಪೋರ್ಟ್ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಟ್ಯಾಕ್ಸಿ ಮತ್ತು ಕ್ಯಾಬ್ ಡ್ರೈವರ್ಗಳು ಬಾರಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರನ್ನ ಪಿಕಪ್ ಮತ್ತು ಡ್ರಾಪ್ ಮಾಡಲು ಏಳು ನಿಮಿಷಕ್ಕೆ 150 ರೂ. ಪ್ರವೇಶ ದರ ಪಾವತಿಸಬೇಕು. ಇನ್ನು ಏಳು ನಿಮಿಷಕ್ಕಿಂತ ಹೆಚ್ಚು ಕಾಲ ನಿಂತರೆ 300 ರೂ. ಪಾವತಿ ಮಾಡಬೇಕು. ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಕಳೆದ ಭಾನುವಾರ ಈ ಹೊಸ ನಿಯಮವನ್ನ ಜಾರಿ ಮಾಡಿತ್ತು.
ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ಹೇಳಿ ಮಹಾರಾಷ್ಟ್ರದಲ್ಲಿ ಮಹಿಳೆಯ ಮಾರಾಟ!: ದೂರು ದಾಖಲು
ಆಡಳಿತ ಮಂಡಳಿಯ ದರ ನಿಗದಿ ಕ್ರಮಕ್ಕೆ ಯಲ್ಲೋ ಹಾಗೂ ವೈಟ್ ಬೋರ್ಡ್ ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು ಕಂಗಾಲಾಗಿದ್ದರು. ಅಲ್ಲದೇ ದರ ನಿಗದಿ ವಿರೋಧಿಸಿ ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು ಸೋಮವಾರ ಪ್ರತಿಭಟನೆ ಮಾಡುವ ಮೂಲಕ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರು ಸೋಮವಾರ ಪ್ರತಿಭಟನೆ ಮಾಡಿದ್ದ ಪರಿಣಾಮ ದರ ನಿಗದಿ ಸಂಗ್ರಹಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.
ಇತ್ತ ಸದ್ಯಕ್ಕೆ ಬ್ರೇಕ್ ಹಾಕಿರುವ ಆಡಳಿತ ಮಂಡಳಿಯವರು ಮತ್ತೆ ಶುರು ಮಾಡುತ್ತಾರೆ ಎಂದು ಏರ್ಪೋರ್ಟ್ ಟ್ಯಾಕ್ಸಿ ಚಾಲಕರು ಇಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನ ಭೇಟಿ ಮಾಡಲು ಮುಂದಾಗಿದ್ದಾರೆ.