ಬೆಳಗಾವಿ : ನಮ್ಮ ರಕ್ತ ಕುದ್ದು ಕುದ್ದು ಮರಳಿ ತಂಪಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಮರುದಿನ ಸುದ್ದಿಗೋಷ್ಠಿ ಮಾಡಿ ಎಲ್ಲ ವಿಚಾರ ಬಹಿರಂಗಪಡಿಸುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಗೋಕಾಕ್ನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗಿ ಹೊಸ ಸರ್ಕಾರ ಬರುತ್ತೆ. ಎಲ್ಲಾ ವಿಚಾರ ಬಹಿರಂಗಪಡಿಸುವುದಿಲ್ಲ. ಮುಂದಿನ ದಿನದಲ್ಲಿ ಎಲ್ಲಾ ಗೊತ್ತಾಗುತ್ತೆ ಎಂದು ಕೆಂಡಾಮಂಡಲವಾಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬೋಗಸ್ ಪ್ರಚಾರಕ್ಕೆ ಮರಳಾಗಬೇಡಿ. ಕಳ್ಳ ಜನರು, ಪಿಕ್ ಪಾಕೇಟ್ ಮಾಡುವಂತಹ ಜನರೇ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅವರ ಹೆಸರು ತೆಗೆದುಕೊಳ್ಳುವುದಿಲ್ಲ. ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ತಾಯಿ ಹೆಂಗ ಬೇಕಾದ ಹಾಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೈದ್ರೂ ನಾನು ಏನು ಮಾತನಾಡೋದಿಲ್ಲ
ನಮಗೂ ರಕ್ತ ಕುದಿಯುತ್ತಿದೆ. ಆದರೆ, ಏನೂ ಮಾಡಲು ಆಗುತ್ತಿಲ್ಲ. ನಾನು ಜೂನ್ 4ನೇ ತಾರೀಖಿನವರೆಗೆ ಏನೂ ಮಾತನಾಡಲ್ಲ. ಜೂನ್ 5ನೇ ತಾರೀಖಿಗೆ ಪ್ರೆಸ್ಮಿಟ್ ಮಾಡಿ ಎಲ್ಲ ತೊಳೆಯುತ್ತೇನೆ. 4ನೇ ತಾರೀಖಿನವರೆಗೆ ಮುಂದೆ ಬಂದು ನಿಂತು ಬೈದ್ರೂ ನಾನು ಏನು ಮಾತನಾಡೋದಿಲ್ಲ ಎಂದು ಹೇಳಿದ್ದಾರೆ.
ಕಳೆದ ಬಾರಿ ನಾವು ಕೆಲವು ತಪ್ಪು ಮಾಡಿದ್ದೇವೆ
ಜಗದೀಶ್ ಶೆಟ್ಟರ್ ಉ.. ದಾಟಿದ್ದೀವಿ ನಾವು, ಅವರಿಗೆ ಎಷ್ಟೇ ಬೈದ್ರೂ ಸಿಟ್ಟು ಬರೋದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೆಲವು ತಪ್ಪು ಮಾಡಿದ್ದೇವೆ. ಮಾತನಾಡಿ ಕೆಟ್ಟಿದ್ದೇವೆ, ಈ ಬಾರಿ ಅದು ಮರುಕಳಿಸುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.