ಮಹಾರಾಷ್ಟ್ರ : ನಾನು ಬದುಕಿರುವವರೆಗೂ ಯಾವುದೇ ಕಾರಣಕ್ಕೂ ಸಂವಿಧಾನ ಬದಲಿಸಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಉದ್ಧವ್ ಠಾಕ್ರೆ ಇಂಡಿಯಾ ಮೈತ್ರಿಕೂಟ ಐದು ವರ್ಷಕ್ಕೆ ಐದು ಪ್ರಧಾನಿಗಳನ್ನು ನಿಲ್ಲಿಸುವ ಫಾರ್ಮುಲಾವನ್ನು ಹೊಂದಿದೆ ಎಂದು ಹೇಳಿದ್ದರು. ಶಿವಸೇನೆ ಪ್ರಕಾರ ಇಂಡಿಯಾ ಮೈತ್ರಿಕೂಟ ಹಲವು ಆಯ್ಕೆಗಳನ್ನು ಹೊಂದಿವೆ ಎಂದು ಹೇಳುತ್ತದೆ. ಅವರಿಗೆ ತಮ್ಮ ನಾಯಕ ಯಾರು ಎಂಬುದನ್ನು ನಿರ್ಧರಿಸಲು ಸಾಧ್ಯವಾಗ್ತಿಲ್ಲ. ಇಂತವರ ಕೈಗೆ ನಮ್ಮ ದೇಶವನ್ನು ಕೊಡ್ತೀರಾ? ಒಂದು ವರ್ಷಕ್ಕೆ ಒಬ್ಬ ಪ್ರಧಾನಿ ಎನ್ನುವಂತೆ ಐದು ವರ್ಷಕ್ಕೆ ಐದು ಪ್ರಧಾನಿಗಳು ಎಂಬುದು ಅವರ ಲೆಕ್ಕಾಚಾರ ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇಕಡ 55ರಷ್ಟು ಪಿತ್ರಾರ್ಜಿತ ತೆರಿಗೆ ಹೇರಲಿದೆ. ಇಡೀ ಜಗತ್ತೇ ಆರ್ಥಿಕತೆಯಲ್ಲಿ ಪ್ರಗತಿ ಕಾಣುತ್ತಿದ್ದಾಗ ಯುಪಿಎ ಅವಧಿಯಲ್ಲಿ ಭಾರತದಲ್ಲಿ ಅಭಿವೃದ್ಧಿಗೆ ಗ್ರಹಣ ಹಿಡಿದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಭ್ರಷ್ಟಾಚಾರದ ಹಣ ಸಂಗ್ರಹಿಸಿ ದೆಹಲಿಗೆ ಕಳುಹಿಸುವ ಕೆಲಸದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿಸಿಕೊಂಡಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಜಾರಿಗೆ ತರುತ್ತದೆ. ಆ ಮೂಲಕ ನೀವು ಪೋಷಕರಿಂದ ಪಡೆಯುವ ಆಸ್ತಿ ಮೇಲೆ ಅರ್ಧಕ್ಕಿಂತ ಹೆಚ್ಚು ಅಂದರೆ ಶೇ. 55ರಷ್ಟು ತೆರಿಗೆ ವಿಧಿಸುತ್ತದೆ ಎಂದು ಆರೋಪಿಸಿದ್ದಾರೆ.