ಮೈಸೂರು : ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸೀಟು ಗೆದ್ದರೆ, ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ನಡೆದ ದಲಿತ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ತತ್ವದಂತೆ ಮೋದಿ ಸರ್ಕಾರ ನಡೆಯುತ್ತಿದೆ. ಆರ್ಎಸ್ಎಸ್ ಸಂವಿಧಾನ ವಿರೋಧಿ ಮನಸ್ಥಿತಿ ಹೊಂದಿದೆ ಎಂದು ಕುಟುಕಿದರು.
400 ಸ್ಥಾನ ಕೊಡಿ ಅಂತ ಪ್ರಧಾನಿ ಮೋದಿ ಕೇಳ್ತಿದ್ದಾರೆ. 400 ಕ್ಕಿಂತ ಹೆಚ್ಚು ಸ್ಥಾನ ಮೋದಿ ಸರ್ಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ. ಈ ಬಗ್ಗೆ ಎಚ್ಚರ ಇರಲಿ. ಬಿಜೆಪಿ ಚುನಾವಣೆ ವೇಳೆ ಮಾತ್ರ ದಲಿತರ ಪರ ಇರುತ್ತದೆ. ಮೀಸಲಾತಿಯನ್ನು ಹಂತ ಹಂತವಾಗಿ ತೆಗೆದು ಹಾಕುವ ಹುನ್ನಾರವನ್ನು ಬಿಜೆಪಿ ಮಾಡಿದೆ. ಆರ್ಎಸ್ಎಸ್ ಯಾವಾಗಲೂ ಮೀಸಲಾತಿ ವಿರುದ್ದ ಇದೆ ಎಂದು ದೂರಿದರು.
ಬಿಜೆಪಿ ಹಿಂದೆ RSS ಕೆಲಸ ಮಾಡುತ್ತಿದೆ
ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷ ಆಗಿದೆ. ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ದೌರ್ಜನ್ಯಗಳು ಹೆಚ್ಚಾಗಿದೆ. ಬಿಜೆಪಿ ಹಿಂದೆ ಆರ್ಎಸ್ಎಸ್ ಕೆಲಸ ಮಾಡುತ್ತಿದೆ. ಆರ್ಎಸ್ಎಸ್ ನಮ್ಮ ಸಂವಿಧಾನವನ್ನ ಒಪ್ಪಿಲ್ಲ. ಆರ್ಎಸ್ಎಸ್ನಿಂದ ಸಂವಿಧಾನ ಉಳಿಸಬೇಕಾದರೆ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮೀಸಲಾತಿ ಬದಲಾವಣೆ ಬಗ್ಗೆ ಚರ್ಚೆ ಮಾಡ್ತಿದ್ದಾರೆ
ರಾಜ್ಯ ಸರ್ಕಾರ ಒಳ ಮೀಸಲಾತಿ ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಬಿಜೆಪಿ ನಾಯಕರು ಯಾರು ಸಹ ಮೀಸಲಾತಿ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ನಾಯಕರ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಮೀಸಲಾತಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿ ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.