ಬೆಂಗಳೂರು : ‘ಡಿಕೆಸು ನೋಟು, ಡಾಕ್ಟರ್ಗೆ ವೋಟು..’ ಹೀಗಂತ ಜನ ಹೇಳುತ್ತಿದ್ದಾರೆ. ‘ಎಡಗೈಲಿ ದುಡ್ಡು ತಗೊತೀವಿ, ಬಲಗೈಲಿ ಡಾಕ್ಟರ್ಗೆ ಮತ ಹಾಕುತ್ತೇವೆ’ ಅಂತಾರೆ ಎಂದು ಮಾಜಿ ಸಚಿವ ಹಾಗೂ ಆರ್.ಆರ್. ನಗರ ಶಾಸಕ ಮುನಿರತ್ನ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೋ ದುಡ್ಡು ಎಲ್ಲಿಂದನೋ ಬರ್ತಿದೆ. ಆ ದುಡ್ಡು ಕಸಗುಡಿಸೋ ದುಡ್ಡು. ಅಪಾರ್ಟ್ಮೆಂಟ್ ದುಡ್ಡು, ಸ್ಕ್ಯಾರ್ ಫೀಟ್ ದುಡ್ಡು ಅಂತ ಜನ ಹೇಳ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಸ್ಯಾಲರಿ ಸ್ಲಿಪ್ ಇಟ್ಟುಕೊಂಡು ಜೀವನ ಮಾಡಿದ ಏಕೈಕ ವ್ಯಕ್ತಿ ಡಾ. ಮಂಜುನಾಥ್. ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆ ತರುವ ಬಗ್ಗೆ ಒಂದು ದಿನನೂ ಯೋಚನೆ ಮಾಡಿದವರಲ್ಲ. ಅಂತಹ ವ್ಯಕ್ತಿ ಗ್ರಾಮಾಂತರದಿಂದ ಸ್ಪರ್ಧೆ ಮಾಡಿದ್ದಾರೆ. ಡಿಕೆ ನೋಟು, ಡಾಕ್ಟರ್ ಗೆ ಓಟು ಎಂದು ಜನರು ಹೇಳ್ತಿದ್ದಾರೆ. ಹರಿದು ಬರ್ತಿರುವ ದುಡ್ಡನ್ನು ಎಡಗೈಯಲ್ಲಿ ತಗೊಂಡು, ಬಲಗೈಯಲ್ಲಿ ಡಾಕ್ಟರ್ಗೆ ಮತ ಹಾಕ್ತೀವಿ ಎಂದು ಜನರು ಹೇಳ್ತಿದ್ದಾರೆ. ಈ ಬಾರಿ ಅತಿ ಹೆಚ್ಚು ಅಂತರದಿಂದ ಗೆಲ್ತಾರೆ ಎಂದು ಚಾಟಿ ಬೀಸಿದ್ದಾರೆ.
ಕುಕ್ಕರ್, ದುಡ್ಡು ಕೊಟ್ಟು ಆಸೆ ಹುಟ್ಟಿಸ್ತಿದ್ದಾರೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಸಾವಿರ ಗಿಫ್ಟ್ ಕಾರ್ಡ್ ಕೊಟ್ಟು ನಿಖಿಲ್ ಅವರನ್ನು ಸೋಲಿಸಿದರು. ಕಾರ್ಡ್ ನಂಬದೆ ಇರೋದು ಎಲ್ಲಿ ಅಂದರೆ ಬೆಂಗಳೂರು ನಗರದಲ್ಲಿ ಮಾತ್ರ. ಬೆಂಗಳೂರು ಗ್ರಾಮಾಂತರದಲ್ಲಿ ಜನರು ಮುಗ್ದರು. ಈಗಾಗಲೇ ಒಂದು ಬಾರಿ ಮೋಸ ಹೋಗಿದ್ದಾರೆ. ಅದಕ್ಕೆ ಇವಾಗ ತಕ್ಕ ಉತ್ತರ ಕೊಡ್ತಾರೆ. ಒಂದು ಸ್ಲಿಪ್ ಕೊಟ್ಟು ಕುಕ್ಕರ್, ದುಡ್ಡು, ಸೀರೆ ಆಸೆ ಹುಟ್ಟಿಸುತ್ತಿದ್ದಾರೆ. ಮಹಿಳಾ ದಿನಾಚರಣೆ ಕ್ರೀಡೋತ್ಸವ ಹೆಸರಲ್ಲಿ ಆ ಕಾರ್ಡ್ ಹಂಚುತ್ತಿದ್ದಾರೆ ಎಂದು ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.