ಮೈಸೂರು : ಏಪ್ರಿಲ್ 14ರಂದು ರಾಜ್ಯಕ್ಕೆ ಮತ್ತೆ ಮೋದಿ ಆಗಮಿಸುತ್ತಾರೆ. ಹಲವು ಕ್ಷೇತ್ರಗಳಲ್ಲಿ ರೋಡ್ ಶೋ, ಪ್ರಚಾರ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿ, ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಿದ್ದರು. ಈ ಬಾರಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು.
ರಾಷ್ಟ್ರಕ್ಕೆ ಯಾರ ನೇತೃತ್ವ ಬೇಕು, ಪಕ್ಷದ ನೀತಿ, ಕೂಡ ಚರ್ಚೆ ಆಗಬೇಕು. ಅಧಿಕಾರ ಇದ್ದಾಗ ನಡೆಸಿದ ಅಧ್ವಾನ, ಹಗರಣಗಳು ಚರ್ಚೆ ಆಗಬೇಕು. ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಅನ್ನೋದನ್ನು ಮರೆತಂತೆ ಕಾಣುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕೊಡುಗೆ ಬಗ್ಗೆ ಹೇಳಿ. ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾಲು ನೀಡಿದವರು ಪ್ರಧಾನಿ ಮೋದಿ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮುಂದಿಟ್ಟಿದ್ದೇವೆ. ಅನ್ಯಾಯ ಮಾಡಿದ್ದಾರೆ ಅನ್ನೋದು ನಿಮ್ಮ ದೃಷ್ಟಿಯಾದರೆ ದೃಷ್ಟಿದೋಷ ನಿವಾರಣೆ ಮಾಡಬೇಕು ಎಂದು ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದರು.
ಮಂತ್ರಿಗಳು ಬರಗೆಟ್ಟವರ ಥರ ಬಾಯಿ ಹಾಕ್ತಾರೆ
ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಟ್ಟಿದ್ದೇವೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು. ಯಾರನ್ನೋ ಕರೆದುಕೊಂಡು ಬಂದು ಇವನು ಒಕ್ಕಲಿಗ ಅಂದರೆ ಹೇಗೆ? ಸಂಸ್ಕಾರ ಇಲ್ಲದವರನ್ನು ಒಕ್ಕಲಿಗರು ನಾಯಕ ಅಂತ ಒಪ್ಪಿಕೊಳ್ಳಲ್ಲ. ಕಾಂಗ್ರೆಸ್ ನವರೆ ನಿಮ್ಮ ಅಭ್ಯರ್ಥಿ ಲಕ್ಷ್ಮಣ್ ನನ್ನು ಲೂಸ್ ಟಾಕರ್ ಅಂತ ಹೇಳುತ್ತಿದ್ದಾರೆ. ನಿಮಗೆ ಗತಿ ಇಲ್ಲದೆ. ನಾಲ್ಕು ಚುನಾವಣೆ ಸೋತವನನ್ನು ಮೈಸೂರು ಅಭ್ಯರ್ಥಿ ಮಾಡಿದ್ದೀರಿ. ಮಂತ್ರಿಗಳು ಬರಗೆಟ್ಟವರ ಥರ ಯಾವುದನ್ನು ಬಿಡದೆ ಎಲ್ಲದಕ್ಕೂ ಬಾಯಿ ಹಾಕುತ್ತಾ ಇರೋದು ಈ ಚುನಾವಣೆಯಲ್ಲಿ ಚರ್ಚೆ ಆಗುತ್ತೆ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದರು.