ಫಿಲ್ಮ್ಡೆಸ್ಕ್ : ಪಿಆರ್ಕೆ ಒಡತಿ, ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ಕುಮಾರ್ ನಿಂದನೆ ಪ್ರಕರಣ ಇದೀಗ ಕಾನೂನಿನ ಬಲೆಗೆ ಸಿಲುಕಿದೆ. ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಟ್ವೀಟ್ ಮಾಡಿದ್ದಾರೆ. ಗಜಪಡೆ ಪೇಜ್ನಿಂದ ಅಪ್ಪು ಮಡದಿಗಾದ ಅಪಮಾನ ಎಂಥದ್ದು..? ನಂತರದ ಬೆಳವಣಿಗೆಗಳೇನು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
ಅಭಿಮಾನ ಅಭಿಮಾನ ಅಭಿಮಾನ.. ಅದು ಅವಮಾನ, ಅಪಮಾನಗಳಿಗೆ ಆಸ್ಪದ ಮಾಡಿಕೊಡುವ ರೇಂಜ್ಗೆ ಅತಿರೇಖ ಅನಿಸಿಕೊಳ್ಳಬಾರದು. ಯಾವುದೋ ದ್ವೇಷ, ಇನ್ಯಾವುದೋ ಕಾರಣಗಳಿಗೆ ಬಳಕೆ ಆಗಬಾರದು. ಚಿತ್ರರಂಗದಲ್ಲಿ ಸ್ಟಾರ್ ವಾರ್ ಹಾಗೂ ಸ್ಟಾರ್ಗಳ ಫ್ಯಾನ್ಸ್ ವಾರ್ ಇರಬೇಕು. ಆದ್ರೆ ಅದು ಆರೋಗ್ಯಕರವಾಗಿರಬೇಕು. ಇತ್ತೀಚೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ವಿಷಯದಲ್ಲಿ ಆದಂತಹ ಬೆಳವಣಿಗೆ ನಿಜಕ್ಕೂ ಶೋಚನೀಯ ಹಾಗೂ ಅಮಾನವೀಯ.
ಹೌದು.. ಆರ್ಸಿಬಿ ಅನ್ಬಾಕ್ಸ್ ಇವೆಂಟ್ಗೆ ಮುತ್ತೈದೆ ಅಲ್ಲದ ಅಶ್ವಿನಿ ಅವ್ರನ್ನ ಕರೆಸಿದ್ದೇ ತಪ್ಪು ಅನ್ನೋ ರೀತಿ ಗಜಪಡೆ ಅನ್ನೋ ದರ್ಶನ್ ಅಭಿಮಾನಿ ಸಂಘದ ಹೆಸರಲ್ಲಿದ್ದ ಪೇಜ್ವೊಂದರಿಂದ ಅಸಹ್ಯ ಪೋಸ್ಟ್ವೊಂದನ್ನ ಹಾಕಲಾಯ್ತು. ಅದಕ್ಕೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಫ್ಯಾನ್ಸ್, ನಟ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿದರು. ಮಿಗಿಲಾಗಿ, ಇಡೀ ಕರುನಾಡೇ ದರ್ಶನ್ ಫ್ಯಾನ್ಸ್ ಮಾಡಿದ ಆ ಟ್ವೀಟ್ಗೆ ಆಕ್ಷೇಪ ವ್ಯಕ್ತಪಡಿಸಿತು. ಒಬ್ಬ ಹೆಣ್ಣಿನ ಸಾರ್ವಜನಿಕ ನಿಂದನೆ ತಪ್ಪು ಅನ್ನೋದನ್ನ ನಟ ದರ್ಶನ್ ತನ್ನ ಫ್ಯಾನ್ಸ್ಗೆ ತಿಳಿ ಹೇಳಲೇ ಇಲ್ಲ. ಆ ಕಡೆ ಅವ್ರೂ ಕೂಡ ಕೈಗೆ ಶಸ್ತ್ರಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದಾರೆ.
ಇದನ್ನೂ ಓದಿ: ಕೀಳುಮಟ್ಟದ ಟ್ವೀಟ್: ʻದರ್ಶನ್ʼ ಫ್ಯಾನ್ಸ್ ವಿರುದ್ಧ ದೂರು ನೀಡಲು ಮುಂದಾದ ಅಪ್ಪು ಅಭಿಮಾನಿಗಳು!
ಆದ್ರೆ ಗಜಪಡೆ ಅಂತಿದ್ದ ಪೇಜ್ ನೇಮ್, ಸುದೀಪ್ ಅಭಿಮಾನಿಯಾಗಿ ಬದಲಾಗಿದೆ. ಇದರಲ್ಲೇ ಗೊತ್ತಾಗ್ತಿದೆ ಇದು ಬೇಕು ಅಂತಲೇ ಮಾಡಿರೋ ಟ್ವೀಟ್ ಅನ್ನೋದು. ಇನ್ನು ಈ ಬಗ್ಗೆ ಕೆರಳಿದ ಅಪ್ಪು ಅಭಿಮಾನಿಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುನೀತ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಭಿನ್ನಾಭಿಪ್ರಾಯ ಸೃಷ್ಠಿಸಿರೋರ ವಿರುದ್ಧ ಕ್ರಮ ಜರುಗಿಸಲು ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದು, ಪತಿಯನ್ನ ಕಳೆದುಕೊಂಡ ಹೆಣ್ಣುಮಗಳನ್ನ ಸಾರ್ವಜನಿಕವಾಗಿ ಅಪಮಾನ ಮಾಡಿ, ವಿಕೃತಿ ಮೆರೆದಿರೋದು ಖಂಡನೀಯ ಎಂದಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅಲ್ಲದೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗರತ್ನ ಚೌಧರಿ ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಸದ್ಯದಲ್ಲೇ ಗಜಪಡೆ ಪೇಜ್ ಅಡ್ಮಿನ್ಗೆ ನೋಟಿಸ್ ಕೂಡ ಜಾರಿಯಾಗಲಿದ್ದು, ನಟ ದರ್ಶನ್ಗೂ ಈ ವಿಚಾರ ನೋಟಿಸ್ ಹೋದರೆ ಅಚ್ಚರಿಯಿಲ್ಲ ಎನ್ನಲಾಗ್ತಿದೆ.
ಈ ಕುರಿತು ಮೌನ ಮುರಿದಿರೋ ಅಶ್ವಿನಿ ಪುನೀತ್ ರಾಜ್ಕುಮಾರ್, ಆಪ್ಷನ್ ಇಲ್ಲ.. ಲೈಫ್ ಗೋಸ್ ಆನ್.. ಪಾಸಿಟಿವ್ ಹಾಗೂ ನೆಗೆಟಿವ್ ವಿಷಯಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಅಂತ ದೊಡ್ಡತನ ಮೆರೆದಿದ್ದಾರೆ.
ಇಡೀ ಚಿತ್ರರಂಗ ಅಶ್ವಿನಿ ಪರ ದನಿ ಎತ್ತಿದ್ದು, ನಟ ಜಗ್ಗೇಶ್- ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ದಾರ ಆದ ಇತಿಹಾಸವೇ ಇಲ್ಲ ಅಂತ ಅಣಕಿಸಿದವ್ರಿಗೆ ತಾಯಿ ಬೆಲೆ ಗೊತ್ತೇನ್ರೋ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಾರೆ ಇದು ಆರೋಗ್ಯಕರ ಬೆಳವಣಿಗೆಯಂತೂ ಅಲ್ಲ. ಇದಕ್ಕೆ ಯಾರು ಕಡಿವಾಣ ಹಾಕ್ತಾರೆ..? ಹೇಗೆ ಹಾಕ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ