ಹಾವೇರಿ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಚಿದಂಬರಂ ಬೇಲ್ ಮೇಲೆ ಇದ್ದರಾ ಇಲ್ಲವಾ? ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಾಗ್ದಾಳಿ ನಡೆಸಿದರು.
ಬ್ಯಾಡಗಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆಯೇ? ಭ್ರಷ್ಟಾಚಾರಿಗಳನ್ನು ಉಳಿಸಿಕೊಳ್ಳೋದಷ್ಟೇ ಕಾಂಗ್ರೆಸ್ ಕೆಲಸ. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲವಾ? ಎಂದು ಪ್ರಶ್ನೆ ಮಾಡಿದರು.
ಡಿಸಿಎಂ ಡಿ.ಕೆ ಶಿವಕುಮಾರ್ ಬೇಲ್ ಮೇಲೆ ಇಲ್ಲವಾ? ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿ ಇಲ್ಲವಾ? ತಮಿಳುನಾಡಿನ ಮಂತ್ರಿ ಜೈಲಿನಲ್ಲಿ ಇಲ್ಲವಾ? ಎಲ್ಲಾ ಬೇಲ್ ಹಾಗೂ ಜೈಲಿನಲ್ಲಿದ್ದಾರೆ. ಇಂಥವರು ಅಧಿಕಾರಕ್ಕೆ ಬರಬೇಕಾ? 400ಕ್ಕಿಂತ ಹೆಚ್ಚು ಸೀಟು ನಾವು ಗೆಲ್ಲಬೇಕಿದೆ ಎಂದು ಹೇಳಿದರು.
ಈ ಚುನಾವಣೆ ಬೊಮ್ಮಾಯಿಗಾಗಿ ಅಲ್ಲ
ಈ ಚುನಾವಣೆ ಬಸವರಾಜ ಬೊಮ್ಮಾಯಿಗಾಗಿ ಅಲ್ಲ. ಈ ಚುನಾವಣೆ ಭವ್ಯ ಭಾರತದ ನಿರ್ಮಾಣಕ್ಕಾಗಿ, ಮೋದಿಯವರಿಗೆ ಬೆಂಬಲಿಸುವ ಚುನಾವಣೆ. ನಿಮಗೆ ಅಕ್ಕಿ ಸಿಕ್ಕಿಲ್ಲವಾ? ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಕೊಟ್ಟಿಲ್ಲವಾ? ಎಲ್ಲರ ಏಳಿಗೆ ಯೋಚಿಸಿದವರು ಮೋದಿಯವರು ಎಂದು ತಿಳಿಸಿದರು.
ಕಾಂಗ್ರೆಸ್ ಅಂದರೆ ಕಮಿಷನ್ ಅಂತ ಅರ್ಥ
ಪ್ರವಾಹದ ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಮಗೆ ಮನೆ ಕಟ್ಟಿಸಿದ್ದಾರೆ. ಕಾಂಗ್ರೆಸ್ ಅಂದರೆ ಕಮಿಷನ್ ಅಂತ ಅರ್ಥ, ಭ್ರಷ್ಟಾಚಾರ ಅಂತ ಅರ್ಥ ಎಂದು ಕಾಂಗ್ರೆಸ್ ವಿರುದ್ಧ ಜೆ.ಪಿ. ನಡ್ಡಾ ವಾಗ್ದಾಳಿ ನಡೆಸಿದರು.