ಹಾವೇರಿ : ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಸರ್ಕಾರಕ್ಕೆ ಉಳಿಗಾಲ ಇಲ್ಲ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಹಾವೇರಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. 6 ತಿಂಗಳು ಅಥವಾ 1 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ಭವಿಷ್ಯ ನುಡಿದರು.
ಇವರು ಅಧಿಕಾರಕ್ಕೆ ಬಂದ್ಮೇಲೆ ನಮ್ಮ ಸರ್ಕಾರದ ಜನಪರ ಯೋಜನೆ ನಿಲ್ಲಿಸಿದರು. ಸಮಾಜಗಳ ಮಧ್ಯೆ ಅಂತರ ಬಿತ್ತುವವರು ಕಾಂಗ್ರೆಸ್ನವರು. ಜಾತಿ ಜನಾಂಗದ ಮಧ್ಯೆ ಕಾಂಗ್ರೆಸ್ನವರು ಸಂಘರ್ಷ ಉಂಟು ಮಾಡ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಹಾಗೂ ಹಿಂದೂಸ್ಥಾನ್ ಮೂರ್ದಾಬಾದ್ ಅಂತ ಕರೆಯೋರ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ. ಅಂತವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಅಂತ ಕರಿಯುತ್ತಾರೆ ಎಂದು ಕುಟುಕಿದರು.
ದೇಶವನ್ನ ಕಟ್ಟುವವರಿಗೆ ಅಧಿಕಾರ ಕೊಡಿ
ಪಾಕಿಸ್ತಾನದಿಂದ ಬೆಂಬಲ ಪಡೆದ PFI ಹಾಗೂ SDPI ಜೊತೆ ಕಾಂಗ್ರೆಸ್ ಸೇರಿದೆ. ರಾಜಕೀಯ ಲಾಭಕ್ಕೆ ಈ ಸಂಘಟನೆ ಜೊತೆ ಕಾಂಗ್ರೆಸ್ ಸೇರಿದೆ. ದೇಶವನ್ನ ಕಟ್ಟುವವರಿಗೆ ಅಧಿಕಾರ ಜನರು ನೀಡಬೇಕು. ಕಾಂಗ್ರೆಸ್ 10 ತಿಂಗಳ ಆಡಳಿತ ಕಂಡು ಜನ ತಿರ್ಮಾನ ಮಾಡಿದ್ದಾರೆ. ಸರ್ಕಾರದ ಯಾವುದೇ ಇಲಾಖೆಯಲ್ಲಿ ಒಂದು ಸಣ್ಣ ಅಭಿವೃದ್ಧಿಯಾಗಿಲ್ಲ ಎಂದು ಚಾಟಿ ಬೀಸಿದರು.
10 ಕೆಜಿ ಅಕ್ಕಿ ಅಂದ್ರು, ಎಲ್ಲಿ ಕೊಟ್ರು?
ಯಾವುದೇ ಹಣಕಾಸಿನ ವ್ಯವಸ್ಥೆ ಇಲ್ಲದೆ ಗ್ಯಾರಂಟಿ ಯೋಜನೆ ನೀಡಿದರು. ನಮ್ಮ ಸರ್ಕಾರ ಇದ್ದಾಗ ರೈತಪರ ಯೋಜನೆಯನ್ನು ನಾವು ನೀಡಿದ್ವಿ. 10 ಕೆಜಿ ಅಕ್ಕಿ ಅಂದ್ರು ಎಲ್ಲಿ ನೀಡಿದ್ರು..? ಕೇಂದ್ರ ಸರ್ಕಾರದ ಅಕ್ಕಿ ಜನರಿಗೆ ನೀಡಿ, ನಾವೇ ನೀಡಿದ್ವಿ ಅಂತ ಪ್ರಚಾರ ಮಾಡ್ತಾರೆ ಎಂದು ಬಸವರಾಜ್ ಬೊಮ್ಮಾಯಿ ಟೀಕಿಸಿದರು.