ಹಾವೇರಿ : ನಮ್ಮ ಗಂಡಸ್ತನ ನಾವು ಅವಾಗಲೇ ತೋರಿಸಿದ್ದೇವೆ. ಸದ್ಯ ಗಂಡಸ್ತನ ಟೆಸ್ಟ್ ಆಗೋದು ಯಾರು ಅಧಿಕಾರದಲ್ಲಿದ್ದಾರೆ ಅವರದ್ದು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಹಾವೇರಿಯ ಆಡೂರ ಗ್ರಾಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನತೆ ಸಿದ್ದರಾಮಯ್ಯ ಅವರನ್ನು ಅಧಿಕಾರಕ್ಕೆ ತಂದಿದ್ದಾರೆ. ಅಧಿಕಾರಕ್ಕೆ ತಂದ ಮಾಲೀಕರು ಕಷ್ಟದಲ್ಲಿದ್ದಾರೆ, ಅವರ ಕಷ್ಟಕ್ಕೆ ಧಾವಿಸುವುದು ಅವರ ಕೆಲಸ ಎಂದು ಕುಟುಕಿದರು.
ಪ್ರವಾಹ ಬಂದಾಗ ನಾವು ಯಾರಿಗೂ ಕಾಯದೇ ಪರಿಹಾರವನ್ನು ಎರಡು ಪಟ್ಟು ಬಿಡುಗಡೆ ಮಾಡಿದ್ದೇವೆ. ಒಂದೇ ತಿಂಗಳಲ್ಲಿ 17 ಲಕ್ಷ ಜನರಿಗೆ ಪರಿಹಾರ ಕೊಟ್ಟ ಗಂಡಸ್ತನ ನಮದಿದೆ. ನಾವು ಮೇಲೆ ಯಾರಿಗೂ ಬೊಟ್ಟು ಮಾಡಿ ತೋರಿಸಲಿಲ್ಲ, ನಿಜವಾದ ಗಂಡಸ್ತನ ಪರೀಕ್ಷೆ ಇವರದ್ದೀದೆ. ಮೇಲೆ ಬೊಟ್ಟು ಮಾಡಿ ತೋರಿಸದನೆ ತಮ್ಮ ಖಜಾನೆಯಿಂದ ದುಡ್ಡು ಬಿಡುಗಡೆ ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರು.
ನಿಜವಾದ ಗಂಡಸ್ತನ ತೋರಿಸಿದ್ದೇವೆ
ರೈತರಿಗೆ ಪರಿಹಾರ ಕೊಡಲು ಇವರ ಖಜಾನೆ ಖಾಲಿಯಾಗಿದೆ. ಕುಂಟು ನೆಪ ಹೇಳುತ್ತಿದ್ದಾರೆ. ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ಗಂಡಸ್ತನದ ಬಗ್ಗೆ ಮಾತಾಡ್ತಾರೆ. ನಿಜವಾದ ಗಂಡಸ್ತನ ನಮ್ಮ ಅಧಿಕಾರ ಇದ್ದಾಗ ತೋರಿಸಿದ್ದೇವೆ, ಅವರ ಅಧಿಕಾರ ಇದ್ದಾಗ ಅವರು ತೋರಿಸಲಿ ಎಂದು ಕಿಡಿಕಾರಿದರು.
ಎಸ್ಡಿಪಿಐ ಕಾಂಗ್ರೆಸ್ ಹುಟ್ಟು ಹಾಕಿರುವ ಮರಿ
ರಾಮನ ಹೆಸರು ಹೇಳುತ್ತೇವೆ, ರಾಮರಾಜ್ಯವನ್ನು ಮಾಡಿದ್ದೇವೆ. ರಾಜ್ಯದಲ್ಲಿ ಬರುತ್ತಿರುವ ಅಕ್ಕಿ ಮೋದಿ ಕೊಟ್ಟಿರೋದು, ಬಿಡಿ ಕಾಳನ್ನ ಸಿದ್ದರಾಮಯ್ಯ ಕೊಟ್ಟಿಲ್ಲ. ಇವರಿಗೆ ಯಾವ ನೈತಿಕತೆ ಇದೆ..? ಎಸ್ಡಿಪಿಐ ಕಾಂಗ್ರೆಸ್ ಹುಟ್ಟು ಹಾಕಿರುವ ಮರಿ. ಕಾಂಗ್ರೆಸ್ ರಾಜಕಾರಣದಿಂದ ಹುಟ್ಟು ಹಾಕಿರುವ ಮರಿ. ಅದರ ಪಾಲನೆ, ಪೋಷಣೆ ಕಾಂಗ್ರೆಸ್ನವರು ಮಾಡಿದ್ದಾರೆ. ಹಾಗಾಗಿ, ಅವರು ಅವರ ಜೊತೆ ಇದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಚಾಟಿ ಬೀಸಿದರು.