Wednesday, May 1, 2024

ಬಿಜೆಪಿಯಿಂದ ಸ್ಪರ್ಧಿಸಲು ತುಮಕೂರಿನಲ್ಲಿ ಒಬ್ಬನೇ ಒಬ್ಬ ಗಂಡಸು ಇರಲಿಲ್ವಾ? : ಪರಮೇಶ್ವರ್

ತುಮಕೂರು : ಬಿಜೆಪಿಯಿಂದ ಸ್ಪರ್ಧಿಸಲು ತುಮಕೂರು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಗಂಡಸು ಇರಲಿಲ್ವೇನ್ರಿ..? ಎಂದು ಬಿಜೆಪಿ ವಿರುದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಬಾರಿ ಇಲ್ಲಿಂದ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜ್ ಅವರನ್ನು ಗೆಲ್ಲಿಸಿ ಕಳಿಸಿದ್ರಿ. ಆದ್ರೆ, ಗೆದ್ದ ಮೇಲೆ ಅವರು ಏನು ಕೆಲಸವನ್ನೇ ಮಾಡಲಿಲ್ಲ ಎಂದು ಕುಟುಕಿದರು.

ಈ ಬಾರಿ ಮತ್ತೆ ನಾನು ನಿಂತರೆ ಜನ ಛೀಮಾರಿ ಹಾಕ್ತಾರೆ ಅಂತ ನಿಂತಿಲ್ಲ. ಬದಲಾಗಿ, ಬೆಂಗಳೂರಿನಿಂದ ಸೋಮಣ್ಣ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ. ಯಾಕೆ ಬಿಜೆಪಿಯಿಂದ ಸ್ಪರ್ಧಿಸೋಕೆ ಜಿಲ್ಲೆಯಲ್ಲಿ ಒಂದೇ ಒಂದು ಗಂಡಸು ಇರಲಿಲ್ವಾ? ಮನೆಯ ಮಗ ಒಂದು ಕಡೆ, ಆಚೆ ಮಗ ಒಂದು ಕಡೆ. ಮನೆಯ ಮಗ ಬೇಕಾ, ಆಚೆ ಮಗ ಬೇಕಾ? ಎಂದು ಗುಡುಗಿದರು.

ತುಮಕೂರು ಜನರು ನರಸತ್ತೋರು ಅಂತಾರೆ

ಇವತ್ತು ಜಿಲ್ಲೆಯ ಜನರ ಮರ್ಯಾದೆ ಪ್ರಶ್ನೆ. ನಮ್ಮ ನಿಮ್ಮೆಲ್ಲರಿಗೆ ಮರ್ಯಾದೆ ಪ್ರಶ್ನೆ. ತುಮಕೂರಿನವರನ್ನು ಬಿಟ್ಟು ಬೇರೆಯವರನ್ನ ಗೆಲ್ಲಿಸಿದ್ರೆ, ತುಮಕೂರು ಜನರು ನರಸತ್ತೋರು ಅಂದುಬಿಡ್ತಾರೆ. ಹಾಗೆ ಅನ್ನಿಸಿಕೊಳ್ಳೋಕೆ ನಾವು ರೆಡಿ ಇಲ್ಲಾ. ಎಸ್.ಪಿ. ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಲೇಬೇಕು ಅಂತ ನಾವು ರೆಡಿಯಾಗಬೇಕು ಎಂದು ಮತದಾರರಿಗೆ ಕರೆ ಕೊಟ್ಟರು.

ನಮ್ಮ ಎಲ್ಲಾ ಸೆಲ್​ಗಳು ಚಾರ್ಜ್ ಆಗಿ ಬಂದಿವೆ

ಎತ್ತುಗಳು ನಮ್ಮ ಭಾರ ಹೊತ್ತು ನಿಂತಿವೆ. ಚಿಕ್ಕಣ್ಣ ಬಾರುಕೋಲು ಹಿಡಿದು ಕೂತಿದ್ದಾರೆ. ಹೀಗಾಗಿ, ಜಾಸ್ತಿ ಹೊತ್ತು ಇಲ್ಲಿ ನಿಲ್ಲೋಕಾಗಲ್ಲ . ನೀವೆಲ್ಲ ಇಷ್ಟು ಸಂಖ್ಯೆಯಲ್ಲಿ ಸೇರಿರೋದನ್ನ ನೋಡಿದ್ರೆ, ಮುದ್ದಹನುಮೇಗೌಡರು 100ಕ್ಕೆ 100 ಗೆಲ್ತಾರೆ ಅಂತ ನನಗೆ ಅನಿಸುತ್ತದೆ. ನಮ್ಮ ಎಲ್ಲಾ ಸೆಲ್​ಗಳು ಈಗ ತಾನೆ ಚಾರ್ಜ್ ಆಗಿ ಬಂದಿವೆ ಎಂದು ಸಚಿವ ಪರಮೇಶ್ವರ್ ಹೇಳಿದರು.

RELATED ARTICLES

Related Articles

TRENDING ARTICLES