ಬಾಗಲಕೋಟೆ: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವೀಡಿಯೋಗಳ ಪೆನ್ಡ್ರೈವ್ ಪ್ರಕರಣದ ಬಗ್ಗೆ ಸ್ಯಾಂಡಲ್ವುಡ್ ನಟ, ನಿರ್ದೇಶ ಎಸ್.ನಾರಾಯಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯ ಬೆನಕನಹಟ್ಟಿಯಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಹಾಸನದ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡದೇ ಇರುವುದು ಸೂಕ್ತ. ಇವೆಲ್ಲಾ ರಾಜ್ಯಕ್ಕೆ ಕಳಂಕ ತರುವ ವಿಚಾರ, ಈಗಾಗಲೇ ಅದು ವಾಕರಿಕೆ ಆಗುವಷ್ಟು ಸುದ್ದಿ ಆಗಿದೆ, ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವುದು ಅಕ್ಷಮ್ಯ ಎಂದು ಅಭಿಪ್ರಾಯ ಪಟ್ಟರು.
ಇದನ್ನೂ ಓದಿ: ರೇವಣ್ಣ, ಪ್ರಜ್ವಲ್ಗೆ SIT ನೋಟೀಸ್: ಪ್ರಕರಣಕ್ಕೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಎಂಟ್ರಿ
ಹಾಸನದ ವಿಡಿಯೋ ಕೇಸ್ ಬಗ್ಗೆ ಈಗಾಗಲೇ ತನಿಖೆ ಆಗುತ್ತಿದೆ. ಅವ್ರನ್ನ ಕರೆತರುವ ಪ್ರಯತ್ನ ನಡೆಯುತ್ತಿದೆ. ಅದರ ಬಗ್ಗೆ ನಾವು ಮಾತನಾಡದೇ ಇರುವುದೇ ಉತ್ತಮ. ಯಾಕೆಂದರೆ ಒಳ್ಳೆಯ ವಿಷಯಗಳನ್ನು 10 ಸಾರಿ ಮಾತನಾಡೋಣ. ಕೆಟ್ಟ ವಿಷಯಗಳನ್ನು ಮರೆತು ಬಿಡೋಣ. ಇವೆಲ್ಲ ರಾಜ್ಯಕ್ಕೆ ಕಳಂಕ ಬರುವಂತ ವಿಚಾರಗಳು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ.
ಯಾರೂ ಕೂಡ ಇಂತಹ ಕೆಲಸಗಳನ್ನು ಮಾಡಬಾರದು. ಇದೊಂದು ಅನಾಗರಿಕತೆ, ಅನ್ಯಾಯ ಯಾರಿಗೆ ಆದ್ರೂ ಅದು ಅನ್ಯಾಯವೇ. ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳೋದು ಅಕ್ಷಮ್ಯ ಅಪರಾಧ. ಹೆಣ್ಣು ಮಕ್ಕಳು ಕೂಡಾ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನಿರ್ದೇಶಕ ಎಸ್. ನಾರಾಯಣ್ ಅವರು ಹೇಳಿದ್ದಾರೆ.