ರಾಮನಗರ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಸಲ್ಲಿಕೆಯಾಗಿರುವ ಹೆಸರುಗಳ ಪೈಕಿ ಮಂಜುನಾಥ ಎಂಬ ಹೆಸರು ಭಾರಿ ಸುದ್ದಿಯಲ್ಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ.ಎನ್ ಮಂಜುನಾಥ್ ಎಂಬುವವರು ಉಮೇದುವಾರಿಕೆ ಸಲ್ಲಿಸಿದ್ದರೆ, ಅದೇ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಎಂಬುವವರು ಬಹುಜನ ಭಾರತ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಸದ್ಯ ಇವರು ಸಲ್ಲಿಸಿರುವ ದಾಖಲೆಗಳು ನಖಲಿ ಎಂದು ಬಿಜೆಪಿ ಆರೋಪ ಮಾಡಿದೆ.
ಬಹು ಜನ ಭಾರತ ಪಕ್ಷದಿಂದ (ಬಿಬಿಪಿ) ಇನ್ನೊಬ್ಬ ಡಾ. ಸಿ.ಎನ್ ಮಂಜುನಾಥ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ನಾಮಪತ್ರ ಸಲ್ಲಿಕೆ ವೇಳೆ ನಕಲಿ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲು ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ: ಇಂದು ಬಿಜೆಪಿ ಘಟಾನುಘಟಿಗಳಿಂದ ಬೃಹತ್ ರೋಡ್ ಶೊ ಮೂಲಕ ನಾಮಪತ್ರ ಸಲ್ಲಿಕೆ!
ಚೆನ್ನೈ ಮೂಲದ ʼಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯʼದ ಸರ್ಟಿಫಿಕೇಟ್ ಎಂದು ಅವರು ವಿಳಾಸ ನಮೂದಿಸಿದ್ದಾರೆ. ಈ ಹೆಸರಿನ ವಿಶ್ವವಿದ್ಯಾಲಯ ಭಾರತದಲ್ಲೇ ಇಲ್ಲ ಎಂದು ಆರೋಪಿಸಲಾಗಿದೆ. ಯುಜಿಸಿ ಕೆಳಗೆ ಇಂಥಾ ಯಾವುದೇ ವಿಶ್ವವಿದ್ಯಾಲಯ ರಿಜಿಸ್ಟರ್ ಆಗಿಲ್ಲ. ಫೇಕ್ ಸರ್ಟಿಫಿಕೇಟ್ ತೋರಿಸಿ ಡಾಕ್ಟರ್ ಎಂದು ಹೇಳಿಕೊಳ್ಳಲು ತಂತ್ರ ಬಳಸಿದ್ದಾರೆ ಎಂದು ದೂರಲಾಗಿದೆ. ಸುಳ್ಳು ಸರ್ಟಿಫಿಕೇಟ್ ಹೊಂದಿರುವ ವ್ಯಕ್ತಿ ಹೇಗೆ ಡಾಕ್ಟರ್ ಆಗ್ತಾರೆ ಅಂತ ಮೈತ್ರಿ ನಾಯಕರ ಪ್ರಶ್ನೆಯಾಗಿದೆ.
ನಾಲ್ವರು ಮಂಜುನಾಥರಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅಷ್ಟೇ ಅಲ್ಲದೆ ಮಂಜುನಾಥ್ ಹೆಸರಿನ ಇನ್ನೂ ನಾಲ್ವರು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಹುಜನ ಭಾರತ ಪಾರ್ಟಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್, ಪಕ್ಷೇತರರಾಗಿ ಸಿ.ಮಂಜುನಾಥ್, ಎನ್.ಮಂಜುನಾಥ್, ಕೆ.ಮಂಜುನಾಥ್ ಎಂಬವರು ಕೂಡ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದ್ದಕ್ಕಿದ್ದಂತೆ ಇಷ್ಟೊಂದು ಮಂಜುನಾಥರು ಎಲ್ಲಿಂದ ಉದ್ಭವವಾದರು ಎಂದು ಮತದಾರರು ತಲೆ ಕೆರೆದುಕೊಳ್ಳುವಂತಾಗಿದೆ.