ಬೆಂಗಳೂರು : ಬಿಜೆಪಿ, ಜೆಡಿಎಸ್ ಮನಸ್ಸು ಹಾಗೂ ಹೃದಯ ಒಂದಾಗಿದೆ. ಎರಡೂ ಪಕ್ಷ ಹಾಲು ಜೇನು ಇದ್ದ ಹಾಗೆ. ಚಿನ್ನದ ರೀತಿಯೂ ಈ ಮೈತ್ರಿ ಇರಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬರಬೇಕು ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ, ರಾಜಕೀಯವೇ ನನ್ನನ್ನ ಎಳೆದುಕೊಂಡಿದೆ. ರಾಜಕಾರಣಕ್ಕೆ ಬಂದಿದ್ರೂ ನಾನು ರಾಜಕೀಯ ಮಾಡುವುದಿಲ್ಲ ಎಂದು ಡಿಕೆ ಸಹೋದರರಿಗೆ ತಿರುಗೇಟು ನೀಡಿದರು.
ವೈಯಕ್ತಿಕ ಟೀಕೆ ಬದಲಿಗೆ ಅಭಿವೃದ್ಧಿ ಬಗ್ಗೆ ಮಾತನಾಡಿ. ರಾಜ್ಯದ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲಿಸಬೇಕು. ಬೆಂಗಳೂರು ಗ್ರಾಮಾಂತರದಲ್ಲಿ ಬದಲಾವಣೆಯ ಗಾಳಿಯನ್ನ ಜನ ಬಯಸುತ್ತಿದ್ದಾರೆ. ಅನುದಾನ ಮುಖ್ಯವಲ್ಲ, ಅನುಷ್ಠಾನ ಮುಖ್ಯ. ರೈಲಿನ ಎರಡು ಬದಿ ರೈತರು, ಕೂಲಿ ಕಾರ್ಮಿಕರ ಕಷ್ಟ ಕಾಣುತ್ತೆ. ರೈಲಿನಲ್ಲಿ ಪ್ರಯಾಣ ಮಾಡುವಾಗಲೇ ಜನರ ಸಂಕಷ್ಟ ಗಾಂಧೀಜಿಯವರಿಗೆ ಗೊತ್ತಾಗಿದ್ದು. ಟೀಕೆ ಸಾಯುತ್ತವೆ, ಸಾಧನೆಗಳು ಜೀವಂತವಾಗಿರುತ್ತದೆ ಎಂದು ನಯವಾಗಿಯೇ ಚಾಟಿ ಬೀಸಿದರು.
ಮುಸ್ಲಿಮರಿಗೆ ಮೀಸಲಾತಿ ಕೊಟ್ಟವರು ದೇವಗೌಡ್ರು
24 ದಿನ ಮಾತ್ರ ಬಾಕಿ ಇದೆ. ಮುಸ್ಲಿಂ ಬಾಂಧವರಿಗೆ ಶೇ.4% ಮೀಸಲಾತಿ ಕೊಟ್ಟವರು ದೇವಗೌಡರು. ದೆಹಲಿ ಮೆಟ್ರೋ ಚಾಲನೆ ಕೊಟ್ಟಿದ್ದು ದೇವೇಗೌಡ್ರು. ಕಾಶ್ಮೀರ ಸಮಸ್ಯೆ ಬಗೆಹರಿಸಿದ್ದು ಮಾಜಿ ಪ್ರಧಾನಿ ದೇವೇಗೌಡರು. ಶೇ.33% ಮೀಸಲಾತಿ ಇಟ್ಟವರು ದೇವೇಗೌಡರು. ಮೋದಿ ಸರ್ಕಾರ ಬರುತ್ತೆ ಅಂತ ಎಲ್ಲ ಸಮೀಕ್ಷೆಗಳು ಹೇಳುತ್ತಿವೆ ಎಂದು ಡಾ. ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.