ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಸಹೋದರ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಶೀರ್ವಾದ ಪಡೆದಿದ್ದಾರೆ.
ರಾಮನಗರಕ್ಕೆ ಹೊರಡುವ ಮೊದಲು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅಣ್ಣ ಡಿ.ಕೆ. ಶಿವಕುಮಾರ್ ಹಾಗೂ ಅತ್ತಿಗೆ ಉಷಾ ಶಿವಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಬಳಿಕ ಡಿಕೆಶಿ ಹಾಗೂ ಡಿ.ಕೆ. ಸುರೇಶ್ ಅವರು ಕನಕಪುರಕ್ಕೆ ತೆರಳಿದ್ದಾರೆ. ಕನಕಪುರದ ಕೆಂಕೇರಮ್ಮ ದೇವಾಲಯಕ್ಕೆ ಆಗಮಿಸಿ, ನಾಮಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಕೆಶಿ ತಾಯಿ ಗೌರಮ್ಮ, ಪತ್ನಿ ಉಷಾ, ಮಗಳು ಐಶ್ವರ್ಯ ಜೊತೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸುರೇಶ್ಗೆ ಮೊದಲ ಬಿ ಫಾರಂ ಕೊಟ್ಟಿದ್ದೇವೆ
ಇವತ್ತು ಡಿ.ಕೆ ಸುರೇಶ್ ಅವರಿಗೆ ಮೊದಲ ಬಿ ಫಾರಂ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ, ನಾನು ನಮ್ಮ ಮನೆ ದೇವರು ಕೆಂಕೇರಮ್ಮ, ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ಪಡೆಯುತ್ತೇವೆ. ನಂತರ ಮುಖ್ಯಮಂತ್ರಿಗಳು ಸಭೆಯಲ್ಲಿ ಇಂದು ಭಾಗಿಯಾಗುತ್ತೇನೆ. ನಾವು ಎಲೆಕ್ಷನ್ ಇವತ್ತು ಫೇಸ್ ಮಾಡ್ತಿಲ್ಲ. ಪ್ರತಿ ದಿನವೂ ರೂಪುರೇಷೆಗಳನ್ನ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.