ಉತ್ತರಕನ್ನಡ : ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಗೊಂದಲದ ಹಿನ್ನೆಲೆ ಯಾವುದೇ ಅಭ್ಯರ್ಥಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಕುಮಟಾದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ಉಂಟಾಗಿರುವ ಬಗ್ಗೆ ಮಾಹಿತಿ ಬಂದಿದೆ, ಯಾರೂ ಕೂಡ ಗಾಬರಿಯಾಗುವುದು ಬೇಡ, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಮುಖ್ಯ, ಲಕ್ಷ್ಮಣ ರೇಖೆಯಲ್ಲಿ ಯಾರೂ ಶಿಸ್ತು ಮುರಿಯಬಾರದು, ಪಕ್ಷ ಇದ್ರೆ ನಾವೆಲ್ಲ, ಪಕ್ಷ ಇಲ್ಲಾಂದ್ರೆ ನಾವ್ಯಾರು ಇಲ್ಲ.
ಇಂದು ನಾನು ಮತ್ತು ಮುಖ್ಯಮಂತ್ರಿಗಳು ಇಬ್ಬರು ಸೇರಿ ಮುಖಂಡರೊಂದಿಗೆ ಚರ್ಚೆ ಮಾಡುತ್ತೇವೆ, ಯಾವುದೇ ಸಮಸ್ಯೆ ಇದ್ದರು ನಾವು ಬಗೆಹರಿಸುತ್ತೇವೆ, ಇದರಲ್ಲಿ ರಾಜ್ಯದ ಹಿತ ಮತ್ತು ಪಕ್ಷದ ಹಿತವನ್ನು ನೋಡಬೇಕಾಗುತ್ತದೆ. ಪಕ್ಷಕ್ಕೆ ಆತಂಕ ತರುವ ಕೆಲಸ ಯಾರು ಮಾಡಬಾರದು. ಕೋಲಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಟಿಕೆಟ್ ಘೋಷಣೆಯಾಗಿಲ್ಲ ಇದು ತಪ್ಪು ಗ್ರಹಿಕೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಜೆಪಿ ಮತ್ತೊಂದು ವಿಕೆಟ್ ಪತನ: ಪರಿಷತ್ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ!
ಮೊದಲು ಅವರ ತಟ್ಟೆಯಲ್ಲಿರುವ ಹೆಗಣ ನೋಡಿಕೊಳ್ಳಲಿ:
ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದಲ್ಲಿ ಯಾವುದು ಸರಿಯಿಲ್ಲ ಮುಂದಿನ ದಿನಗಳಲ್ಲಿ ಮತ್ತಷ್ಟು ಗೊಂದಲಗಳು ಕಾಂಗ್ರೆಸ್ನಲ್ಲಿ ಉಂಟಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಮೊದಲು ಅವರ ತಟ್ಟೆಯಲ್ಲಿರುವ ಹೆಗಣದ ಬಗ್ಗೆ ಅವರು ನೋಡಿಕೊಳ್ಳಲಿ ಆಮೇಲೆ ಮಾತನಾಡಿ ಎಂದು ತಿರುಗೇಟು ನೀಡಿದರು.
ಕಾವೇರಿ ನೀಡು ಬಿಡುವಂತೆ ತಮಿಳುನಾಡು ಒತ್ತಡ :
ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ, ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ತಮಿಳುನಾಡಿಗೆ ಸಾಕಾಗುವಷ್ಟು ನೀರಿದ್ದರೂ ಕಾವೇರಿ ನೀರಿಗಾಗಿ ಬೇಡಿಕೆ ಇಡುತ್ತಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಬಳಿ ನೀರಿಲ್ಲ ನಾವು ನೀರು ಬಿಡುವುದಿಲ್ಲ, ಕುಡಿಯೋದಕ್ಕಷ್ಟೆ ನಮ್ಮ ಬಳಿ ನೀರಿದೆ, ಅವರು ನಮ್ಮನ್ನು ಕೇಳಿಲ್ಲ ನಾವು ನೀರು ಬಿಡೋದಿಲ್ಲ ಎಂದರು.
ಕಾಂಗ್ರೆಸ್ ನಿಂದ ನಕಲಿ ಓಟುಗಳ ಸೃಷ್ಟಿ:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ನಕಲಿ ಓಟುಗಳ ಸೃಷ್ಟಿಸುತ್ತಿದೆ, ನಕಲಿ ಮತದಾನ ಮಾಡಲು ಮುಂದಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಖಡಕ್ ಉತ್ತರ ನೀಡಿದ ಡಿಕೆಶಿ, ಕಳ್ಳ ಓಟುಗಳು ಹೇಗೆ ಮಾಡೋಕಾಗುತ್ತೆ ಹಾಗೇನಾದ್ರು ಇದ್ರೆ ಚುನಾವಣಾ ಆಯೋಗ ಇದೆ ಅವರಿಗೆ ದೂರು ನೀಡಲಿ ಎಂದು ಅವರು ಹೆಳಿದರು.