ದಾವಣಗೆರೆ : ಜೂನ್ 4ರಂದು ಕರ್ನಾಟಕದ ಎಲ್ಲೆಡೆ ಸಂಭ್ರಮ ಇರಲಿದೆ. ಬೆಣ್ಣೆ ದೋಸೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ. ಬೆಣ್ಣೆ ದೋಸೆಯ ಮಹತ್ವ ಮತ್ತಷ್ಟು ಹೆಚ್ಚಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ದಾವಣಗೆರೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಹಾವೇರಿ, ದಾವಣಗೆರೆ ಸೋದರಿ, ಸೋದರರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದರು.
ಅನೇಕ ಜನ್ಮಗಳ ಪುಣ್ಯ ಫಲದಿಂದ ನನಗೆ ನಿಮ್ಮ ಆಶೀರ್ವಾದ ಲಭಿಸಿದೆ. ಪರಮಾತ್ಮನೇ ನನ್ನನ್ನು ಈ ಆಶೀರ್ವಾದಕ್ಕೆ ಕಳಿಸಿರಬೇಕು. ನಿಮ್ಮ ಪ್ರೀತಿಗೆ ಪ್ರತಿಕ್ರಿಯಿಸಲು ನನ್ನಲ್ಲಿ ಶಬ್ದಗಳೇ ಇಲ್ಲ. ದೇಶದ ಜನತೆಗೆ ಸಮರ್ಪಣೆ, ಶಿರಬಾಗಿ ನಮಸ್ಕಾರ ಮಾಡ್ತೇನೆ. ನಾನು ಬಗ್ಗಲ್ಲ, ಜಗ್ಗಲ್ಲ, ಕುಗ್ಗಲ್ಲ. ಇದು ಮೋದಿಯ ಗ್ಯಾರಂಟಿ ಎಂದು ಹೇಳಿದರು.
ಕಾಂಗ್ರೆಸ್ನವರಿಗೆ ಭಯ ಶುರುವಾಗಿದೆ
ಏಪ್ರಿಲ್ 14ರಿಂದ ಕಾಂಗ್ರೆಸ್ನವರಿಗೆ ಭಯ ಶುರುವಾಗಿದೆ. ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಉತ್ತಮ ಮತದಾನ ಆಗಿದೆ. ಕಾಂಗ್ರೆಸ್ ಮೇಲಿಂದ ಕೆಳಗಿನ ನಾಯಕರು ಆತಂಕ ಆಗಿದ್ದಾರೆ. ಮೇ 7ರಂದು ಖಾತೆ ತೆರೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ದೆಹಲಿಯಲ್ಲಿ ಕಾಂಗ್ರೆಸ್ ಖಾತೆ ತೆರೆಯುವ ಸಾಧ್ಯತೆ ಇಲ್ಲ. ಕಾಂಗ್ರೆಸ್ಸಿಗೆ ಇಲ್ಲಿ ಜಮಾಯಿಸಿರುವ ಜನ ಉತ್ತರ ನೀಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ಗೆ ಸುಪ್ರೀಂ ಕಪಾಳ ಮೋಕ್ಷ ಮಾಡಿದೆ
ಕಾಂಗ್ರೆಸ್ ಮೈತ್ರಿಕೂಟದ ಆಂತರಿಕ ಕಚ್ಚಾಟ ಶುರು ಆಗಲಿದೆ. ಕಾಂಗ್ರೆಸ್ ಸೋಲಿಗೆ ಮತ ಯಂತ್ರದತ್ತ ಬೆರಳು ತೋರುತ್ತಿತ್ತು. ಅದಕ್ಕೆ ಸುಪ್ರೀಂ ಕೋರ್ಟ್ ಕಾಂಗ್ರೆಸ್ಗೆ ಕಪಾಳ ಮೋಕ್ಷ ಮಾಡಿದೆ. ಈಗ ಮತ ಯಂತ್ರದ ನೆಪ ಮಾಡಿ ಕೂರಲು ಸಾಧ್ಯವಿಲ್ಲ . ಹೀಗಾಗಿ ಹೊರಬಂದು ಮಾತಾಡಲು ಕಾಂಗ್ರೆಸ್ಗೆ ಸಂಕಷ್ಟವಾಗಿದೆ. ಚುನಾವಣೆಯಲ್ಲಿ ಸೋತರೆ ಏನು ಹೇಳೋದು ಅಂತ ಚಿಂತೆ. ಸೋಲಿಗೆ ನೆಪಗಳನ್ನು ಹುಡುಕಲು ಕಾಂಗ್ರೆಸ್ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.