ಬೆಂಗಳೂರು : ಎಂಎಲ್ಸಿಗಳು ಬಿಳಿ ಹಾಳೆ ಮೇಲೆ ರಾಜೀನಾಮೆ ಬರೆದುಕೊಂಡು ಬಂದಿದ್ದರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ 11 ಗಂಟೆಗೆ ನಜೀರ್ ಅಹಮ್ಮದ್ ಅವರು ಕರೆ ಮಾಡಿದ್ದರು. ಅನಿಲ್ ನಾನು ಬರ್ತೀವಿ ಅಂದ್ರು. ಕಚೇರಿಗೆ ಬನ್ನಿ ಅಂತ ಹೇಳಿದ್ದೆ ಎಂದು ತಿಳಿಸಿದರು.
ಅವರು ಬಿಳಿ ಹಾಳೆ ಮೇಲೆ ಬರೆದುಕೊಂಡು ಬಂದಿದ್ದರು. ಲೆಟರ್ ಹೆಡ್ ನಲ್ಲಿ ಬರೆದು ಕೊಡಿ ಅಂದೆ ಅಷ್ಟೇ. ನಂತರ ಅವರ ಪಕ್ಷದ ನಾಯಕರು ಬಂದರು. ನಾನು ಎದ್ದು ಹೋದೆ. ನಂತರ ಅವರು ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಇದು ಪೀಠಕ್ಕೆ ಅಪಮಾನ ಅಂತಲ್ಲ. ರಾಜೀನಾಮೆ ಕೊಡಲು ಬಂದಾಗ ಅವರಿಗೆ ಸಮಯ ನೀಡೋದು ಸಹಜ. ಹಾಗೆಯೇ ನಾನು ಕೂಡ ಸಮಯ ನೀಡಿದೆ ಅಷ್ಟೆ. ನಾನು ಅವರು ರಾಜೀನಾಮೆ ಕೊಡ್ತಾರೆ ಅಂತ ಬಂದಿದ್ದು ಅಷ್ಟೆ. ಇವತ್ತಿನ ರಾಜಕೀಯದಲ್ಲಿ ನೈತಿಕತೆ ಉಳಿದಿಲ್ಲ ಎಂದು ಬಸವರಾಜ ಹೊರಟ್ಟಿ ಬೇಸರಿಸಿದರು.
ರಾತ್ರಿ ಕೂತು ನಾವು ಬಗೆಹರಿಸುತ್ತೇವೆ
ಸಚಿವ ಬೈರತಿ ಸುರೇಶ್ ಮಾತನಾಡಿ, ಕೋಲಾರ ಟಿಕೆಟ್ ಸಂಬಂಧಪಟ್ಟಂತೆ ಇಬ್ಬರು ಎಂಎಲ್ಸಿಗಳು ರಾಜೀನಾಮೆ ಕೊಡಲು ಬಂದಿದ್ದಾರೆ. ಅಸಮಾಧಾನ ಆಗದ ರೀತಿಯಲ್ಲಿ ನಾವು ಸಮಾಧಾನ ಮಾಡ್ತೀವಿ. ರಾತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ಬರ್ತಾ ಇದ್ದಾರೆ. ಟಿಕೆಟ್ ಇನ್ನೂ ಅನೌನ್ಸ್ ಆಗಿಲ್ಲ. ರಾತ್ರಿ ಕೂತು ಇದೆಲ್ಲದನ್ನೂ ನಾವು ಬಗೆಹರಿಸುತ್ತೇವೆ ಎಂದು ಹೇಳಿದರು.