ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ನಿಂದ ಅಧಿಕೃತ ಅಭ್ಯರ್ಥಿಗಳ ಘೋಷಣೆ ಬಾಕಿ ಇದ್ದರು ಮಾಜಿ ಸಚಿವ ಡಾ.ಸುಧಾಕರ್ ಅವರ ಬೆಂಬಲಿಗರು ಕ್ಷೇತ್ರದ ಜನತೆಯಲ್ಲಿ ಸುಧಾಕರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ, ಮುಂದಿನ ಕೇಂದ್ರ ಆರೋಗ್ಯ ಸಚಿವರಿಗೆ ಶುಭಾಶಯಗಳು ಎನ್ನುವ ರೀತಿಯಲ್ಲಿ ಪೋಸ್ಟರ್ಗಳನ್ನ ಹಾಕುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಸುಧಾಕರ್ ವಿರುದ್ದ ಶಾಸಕ ಎಸ್.ಆರ್ ವಿಶ್ವನಾಥ್ ಕಿಡಿ ಕಾರಿದರು.
ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನೆನ್ನೆ ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನತೆಯಲ್ಲಿ ಹೈಕಮಾಂಡ್ ನಿಂದ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗದಿದ್ದರೂ ಸುಧಾಕರ್ ಬೆಂಬಲಿಗರು ಟಿಕೆಟ್ ಘೋಷಣೆಯಾಗಿದೆ ಎಂದು ಕ್ಷೇತ್ರದ ಜನತೆಯಲ್ಲಿ ಗೊಂದಲ ಉಂಟು ಮಾಡುತ್ತಿರುವ ವಿಚಾರ ಅವರ ಗಮನಕ್ಕೆ ತಂದಿದ್ದೇವೆ. ಅಷ್ಟೆ ಅಲ್ಲದೇ ಅಲೋಕ್ ವಿಶ್ವನಾಥ್ ಪತ್ರಿಕಾಗೋಷ್ಟಿಗಳಿಗೆ ಹಾಜರಾಗದಂತೆ ಕ್ಷೇತ್ರದ ಮುಖಂಡರಿಗೆ ಮಾಜಿ ಸಚಿವರು ದಮ್ಕಿ ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಇದು ಒಳ್ಳೆಯ ಬೆಳವಣಿಗೆಗಳಲ್ಲ ಎಂದರು.
ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡ ಬಂಧನ: ಡಿಸಿಪಿ ಗಿರೀಶ್ ಪ್ರತಿಕ್ರಿಯೆ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಸಚಿವರಾಗಿದ್ದವರು ಜನರೊಂದಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ, ಪಕ್ಷ ಸಂಘಟನೆ ಮಾಡಿಲ್ಲ, ಜನರ ಕೈಗೆ ಸಿಕ್ಕಿಲ್ಲ ಎನ್ನುವ ಆರೋಪ ಇದೆ. ಆದರೇ, ಅಲೋಕ್ ವಿಶ್ವನಾಥ್ ಯುವಕ, ಭಾಷೆಯ ಮೇಲೆ ಹಿಡಿತವಿದ್ದು ಕೇಂದ್ರ ರಾಜಕಾರಣಕ್ಕೆ ಸೂಕ್ತ ವ್ಯಕ್ತಿ ಮತ್ತು ಟಿಕೆಟ್ ಸಿಕ್ಕರೆ ಖಂಡಿತ ಗೆಲ್ಲುತ್ತಾರೆ ಎನ್ನುವ ಮಾತನ್ನು ಕ್ಷೇತ್ರದ ಜನ ಅಭಿಪ್ರಾಯ ಪಟ್ಟಿದ್ದಾರೆ ಎಂದರು.
ಇನ್ನು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಅಲೋಕ್ ವಿಶ್ವನಾಥ್ ಗೆ ಬೇರೆ ಬೇರೆ ಕಾರಣಗಳಿಂದ ಟಿಕೆಟ್ ಸಿಗದಿದ್ದರೇ ನನಗೆ ನೀಡಿ ಎಂದು ಹೇಳಿ ಕೇಂದ್ರ ಹಾಗು ರಾಜ್ಯ ನಾಯಕರಿಗೆ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದರು.