ದೇವನಹಳ್ಳಿ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಲೋಕ್ ವಿಶ್ವನಾಥ್ ಅಷ್ಟೆ ಅಲ್ಲ, ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎಂದು ಹೇಳುವ ಮೂಲಕ ಮಾಜಿ ಸಚಿವ ಡಾ.ಕೆ ಸುಧಾಕರ್ಗೆ ಶಾಸಕ ಎಸ್ ಆರ್ ವಿಶ್ವನಾಥ್ ಟಾಂಗ್ ನೀಡಿದ್ದಾರೆ.
ಮಂಗಳವಾರ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಜೊತೆಗೆ ದೆಹಲಿಗೆ ತೆರಳಿದ್ದ ಶಾಸಕ ವಿಶ್ವನಾಥ್, ಇಂದು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ವಾಪಾಸ್ ಆದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನನ್ನನ್ನೂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವಂತೆ ಬಿಜೆಪಿ ಹೈಕಮಾಂಡ್ ನಾಯಕರಿಗೆ ಮೇಲ್ ಮೂಲಕ ಮನವಿ ಮಾಡಿದ್ದೇನೆ, ಈ ಬಾರಿ ಲೋಕಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡಲಿದ್ದಾರೆ ಎನ್ನುವ ವಿಶ್ವಸವಿದೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಮೊದಲು ನನ್ನ ಮಗ ಅಲೋಕ್ ವಿಶ್ವನಾಥ್ ಗೆ ಟಿಕೆಟ್ ಕೊಡಲಿ, ಮಗನನ್ನು ಪರಿಗಣಿಸದಿದ್ದರೇ ನನಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಈಗಾಗಲೇ ಚಿಕ್ಕಬಳ್ಳಾಪುರ ಲೋಕಸಭೆಯಿಂದ ಸ್ಪರ್ಧಿಸಲು ಟಿಕೆಟ್ಗೆ ಕಸರತ್ತು ನಡೆಸುತ್ತಿರುವ ಡಾ.ಸುಧಾಕರ್ ಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಮಾರ್ಚ್ 22ಕ್ಕೆ 5 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ: ಬಿಎಸ್ ಯಡಿಯೂರಪ್ಪ
ಸುಧಾಕರ್ ವಿರುದ್ದ ಈಗಾಗಲೆ ಜಿಲ್ಲೆಯಲ್ಲಿ ವಿರೋಧಿ ಅಲೆ ಇದೆ. ಅವರಿಗೆ ಕೊಡಬಾರದು ಅಂತ ಸಾಕಷ್ಟು ಜನ ಹೇಳ್ತಿದ್ದಾರೆ. ಅಲೋಕ್ ವಿಶ್ವನಾಥ್ ಕಳೆದ ಆರು ತಿಂಗಳುಗಳಿಂದ ತಯಾರಿ ಶುರು ಮಾಡಿದ್ದಾರೆ. ನನ್ನ ಮಗ ಇನ್ನೂ 25 ವರ್ಷಗಳ ಕಾಲ ರಾಜಕೀಯ ಮಾಡಬೇಕಿದೆ. ಹೀಗಾಗಿ ಅಲೋಕ್ ಗೆ ಟಿಕೆಟ್ ಸಿಗಬೇಕು ಅಂತ ಸರ್ವೆಯಲ್ಲು ಮುಖಂಡರು ಹೇಳಿದ್ದಾರೆ.
ಒಂದು ವೇಳೆ ಅಲೋಕ್ ಗೆ ಟಿಕೆಟ್ ಕೊಡಲ್ಲ ಅಂದರೆ ನನಗೆ ಕೊಡಲಿ ನಾನು ಸ್ವರ್ಧೆ ಮಾಡ್ತೀನಿ. ನಮ್ಮ ಕ್ಷೇತ್ರವನ್ನ ಬೇರೊಬ್ಬರಿಗೆ ಬಿಟ್ಟು ಕೊಡಲು ನಾವು ತಯಾರಿಲ್ಲ. ನಮ್ಮ ಯಲಹಂಕ ಒಂದು ಕ್ಷೇತ್ರದಲ್ಲೆ ಎರಡು ಕ್ಷೇತ್ರಗಳಷ್ಟು ಮತಗಳಿವೆ. ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಅನ್ನೂ ವಿಶ್ವಾಸವಿದೆ ಎಂದು ಅವರು ಹೇಳಿದರು.