ಬೆಂಗಳೂರು : ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿನಾ ಕಾರಣ ಒಕ್ಕಲಿಗ ಸಮಾಜವನ್ನ ಯಾಕೆ ತರುತ್ತೀರಿ? ನಾವೇನು ತಪ್ಪು ಮಾಡಿಲ್ಲ, ಸಮಾಜಕ್ಕೆ ಏನು ಆಗಿಲ್ಲ ಅನ್ನೋದಾದ್ರೆ ಒಕ್ಕಲಿಗ ಸಮಾಜ ಯಾಕೆ ತರುತ್ತೀರಿ? ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಪ್ರಜ್ವಲ್ ರಾಸಲೀಲೆ ಪ್ರಕರಣದ ಬಗ್ಗೆ ಮಾತನಾಡಿ, ನೀವು ಅಂದ್ರೆ ಒಕ್ಕಲಿಗರು, ಒಕ್ಕಲಿಗರು ಅಂದ್ರೆ ದೇವೇಗೌಡ್ರು ಅಂದುಕೊಂಡಿದ್ದೀರಾ? ಒಕ್ಕಲಿಗ ಸಮಾಜ ಬೆಳೆಯಲು ಅನೇಕರ ಕೊಡುಗೆ ಇದೆ ಎಂದು ತಿಳಿಸಿದ್ದಾರೆ.
ನಾವುಗಳು ಸಮಾಜಕ್ಕೆ ಕಟ್ಟಾಳು ಅಲ್ಲ, ನೀವೂ ಅಲ್ಲ. ಸಮಾಜದ ವಿಚಾರ ಬಂದಾಗ ನಮ್ಮನ್ನೂ ಬೆಂಬಲಿಸುತ್ತೆ, ನಿಮ್ಮನ್ನೂ ಬೆಂಬಲಿಸುತ್ತೆ. ಏಕವಚನದಲ್ಲಿ ಮಾತನಾಡಿದರೆ ಬಲಿಷ್ಠರಾಗುತ್ತೇವೆ ಅಂದುಕೊಂಡಿದ್ರೆ, ಅದು ನಿಮ್ಮ ಭ್ರಮೆ. ನಿಮಗಿಂತ ಏಕವಚನದಲ್ಲಿ ಮಾತನಾಡಲು ನಮಗೂ ಬರುತ್ತೆ. ಆದರೆ, ನಾವು ಆ ರೀತಿ ಮಾತನಾಡಲ್ಲ ಎಂದು ಹೇಳಿದ್ದಾರೆ.
ಡಿಕೆಶಿ ಏನಾದ್ರೂ ಮಾತನಾಡಿದ್ದಾರ ಹೇಳಿ
ಯಾವ ಸಾಧನೆ ಮಾಡಿದ್ದೀವಿ ಅಂತ ಜೆಡಿಎಸ್ನವರು ಪ್ರತಿಭಟನೆ ಮಾಡ್ತಿದ್ದಾರೆ. ವಿಡಿಯೋ ಮಾಡಿಕೊಂಡು ಪ್ರಕರಣ ಬೆಳಕಿಗೆ ಬರಲು ಕಾರಣ ಯಾರು? ಶಿವರಾಮೇಗೌಡ್ರು, ದೇವರಾಜೇಗೌಡ್ರು ನಡುವೆ ನಡೆದಿರುವ ಸಂಭಾಷಣೆ. ಡಿ.ಕೆ. ಶಿವಕುಮಾರ್ ಏನಾದರೂ ಮಾತನಾಡಿದ್ದಾರ ಹೇಳಿ..? ನಮ್ಮ ಜೊತೆಯಲ್ಲೂ ಅನೇಕರು ಫೋಟೋ ತೆಗೆದುಕೊಳ್ಳುತ್ತಾರೆ. ಫೋಟೋ ತೆಗೆದುಕೊಳ್ಳುವಾಗ ಹಿನ್ನಲೆ ಕೇಳೋಕಾಗುತ್ತಾ? ಎಂದು ಗರಂ ಆಗಿದ್ದಾರೆ.
ಜೆಡಿಎಸ್ನವ್ರು ಡಿಕೆಶಿ ವಜಾ ಮಾಡಿ ಅಂತಾರೆ
ವಿಡಿಯೋ ಬಿಟ್ಟವರು ಯಾರು ಎಂಬ ಬಗ್ಗೆಯೂ ತನಿಖೆಯಾಗಲಿ. ಅದರ ಬಗ್ಗೆ ನಮ್ಮ ತಕರಾರು ಇಲ್ಲ. ಪ್ರಜ್ವಲ್ ಪ್ರಕರಣ ಡೈವರ್ಟ್ ಮಾಡಲು ಜೆಡಿಎಸ್ ಪ್ರತಿಭಟನೆಯ ನಾಟಕ ಮಾಡಿದೆ. ಅಶೋಕ ಹೇಳ್ತಾರೆ, ಕ್ರಮ ಆಗ್ತಿದೆ ಇನ್ನೂ ಆಗಬೇಕು ಅಂತಾರೆ. ಪ್ರಲ್ಹಾದ್ ಜೋಶಿ ಹೇಳ್ತಾರೆ, ತನಿಖೆ ಕರೆಕ್ಟ್ ಟ್ರ್ಯಾಕ್ಗೆ ಹೋಗ್ತಿದೆ ಅಂತ. ಆದರೆ, ಜೆಡಿಎಸ್ನವ್ರು ಡಿಕೆಶಿ ವಜಾ ಮಾಡಿ ಅಂತಾರೆ. ಏನು ಕೋಳಿ ಮರಿನಾ ಇದು? ಲಕ್ಷಾಂತರ ಜನರನ್ನ ಪ್ರತಿನಿಧಿಸುವ ಉಪಮುಖ್ಯಮಂತ್ರಿ ಅವರು, ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.