ಬೆಂಗಳೂರು : ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯಿಂದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಆರಂಭಿಸಿರುವುದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್ ಕೊಟ್ಟರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೋದಿಯವರಿಗೆ ನಮ್ಮ ವಿಪಕ್ಷ ನಾಯಕ ಅಂದ್ರೆ ಭಯ. ಅದಕ್ಕೆ ಅಲ್ಲಿಂದಲೇ ಪ್ರಚಾರ ಪ್ರಾರಂಭ ಮಾಡಿದ್ದಾರೆ. ಕಲಬುರಗಿ ಸೇರಿ 20 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಅಧ್ಯಕ್ಷರನ್ನ ಪ್ರತಿ ತಾಲೂಕಿನಲ್ಲಿ ಮಾಡಿದ್ದೇವೆ. ಅವರದೆಲ್ಲ ಒಂದು ಮೀಟಿಂಗ್ ಕರಿತಾ ಇದ್ದೇವೆ. ಮಾರ್ಚ್ 21ನೇ ತಾರೀಖು ಸಭೆ ಮಾಡಬೇಕು ಎಂದು ತಿರ್ಮಾನ ಮಾಡಿದ್ದೇವೆ. ಸರ್ಕಾರ ಯಾರನ್ನೆಲ್ಲ ಗ್ಯಾರಂಟಿ ಸಮಿತಿಗೆ ನೇಮಕ ಮಾಡಿದೆ ಅವರನೆಲ್ಲಾ ನಾವು ಇಲ್ಲಿಗೆ ಕರೆಯುತ್ತೇವೆ. ಅಷ್ಟೇ ಅಲ್ಲ, ಅವರಿಗೆಲ್ಲ ಚುನಾವಣೆ ಜವಾಬ್ದಾರಿ ಕೊಡುತ್ತೇವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಮಿನೇಶನ್ ಮಾಡುವುದು ಅಷ್ಟೇ ಅಲ್ಲ. ಪಕ್ಷಕ್ಕೂ ದುಡಿಯಬೇಕು ಎಂದು ಹೇಳಿದರು.
ಮಾ.20ಕ್ಕೆ ಎರಡನೇ ಪಟ್ಟಿ ಬಿಡುಗಡೆ
ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಇಂದು ಭಾರತ್ ಜೋಡೋ ನ್ಯಾಯ್ ಯಾತ್ರೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯುತ್ತಿದೆ. ನಾವೆಲ್ಲಾ ಆ ಕಾರ್ಯಕ್ರಮಕ್ಕೆ ಬಾಂಬೆಗೆ ಹೋಗುತ್ತಿದ್ದೇವೆ. ಶಿವಾಜಿ ಪಾರ್ಕ್ನಲ್ಲಿ ಕಾರ್ಯಕ್ರಮ ಇದೆ. ಬಹುಶಃ ಮಾರ್ಚ್ 19ರಂದು ನಮ್ಮ ಮೀಟಿಂಗ್, ಅವತ್ತೇ ತಿರ್ಮಾನ ಆಗುತ್ತೆ. ಆದರೆ, ನಾವು ಘೋಷಣೆ ಮಾಡುವುದು ಮಾರ್ಚ್ 20ಕ್ಕೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.