ಮಂಡ್ಯ : ಅಂಬರೀಶ್ ಅಣ್ಣ ಇದ್ದಾಗ ಅವರ ಮನೆಗೆ ಹೋಗ್ತಿದ್ವಿ, ಬರ್ತಿದ್ವಿ. ಅಕ್ಕ ಅಂತ ಕರಿಯುತ್ತಿದ್ವಿ, ಈಗಲೂ ಅಕ್ಕ ಅಂತನೇ ಕರೆಯೋದು ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ಮಂಡ್ಯದಲ್ಲಿ ಮಾತನಾಡಿರುವ ಅವರು, ಸುಮಲತಾ ಅವರ ಬಗ್ಗೆ ನಾನು ಯಾವತ್ತು ಮಾತನಾಡಿಲ್ಲ ಎಂದು ತಿಳಿಸಿದರು.
ರಾಜಕೀಯದಲ್ಲಿ ಎಂತ ಎಂತವರೋ ಒಂದಾಗುತ್ತಾರೆ ಇದ್ಯಾವುದಪ್ಪ? ಮಂಡ್ಯ ಕ್ಷೇತ್ರ ಬಿಜೆಪಿಗೆ ಬಿಟ್ಟಿಕೊಟ್ಟಿದ್ರೆ ನಾನು ಮಾಡಬೇಕಿತ್ತಲ್ವಾ? ನಾವು ಮೈತ್ರಿ ಧರ್ಮ ಪಾಲನೆ ಮಾಡ್ತೇವೆ. ನಾವು ಕಾಂಗ್ರೆಸ್ನವರಲ್ಲ ಬೆನ್ನಿಗೆ ಚೂರಿ ಹಾಕೋಕೆ. ಇವರ ಯೋಗ್ಯತೆಗೆ ಕಳೆದ ಬಾರಿ ಕಾಂಗ್ರೆಸ್ ನವರು ಮೋಸ ಮಾಡಿದ್ರು ಎಂದು ಕುಟುಕಿದರು.
ಇನ್ನೊಬ್ರು ಡ್ರಾಮಾ ಮಾಡಿದೆ ಅಂದ್ರು
ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡರು, ನಿಖಿಲ್ಗೆ ಅನ್ಯಾಯ ಮಾಡಿದ್ದೇವೆ ಅಂತ. ಇನ್ನೊಬ್ರು ಡ್ರಾಮಾ ಮಾಡಿದೆ ಅಂದ್ರು. ನಮ್ಮ ಪಕ್ಷದ ಅಭ್ಯರ್ಥಿಯನ್ನ ಪಕ್ಷ ತೀರ್ಮಾನ ಮಾಡುತ್ತೆ. ಯಾರೇ ಅಭ್ಯರ್ಥಿ ಆದರೂ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ ಎಂದು ಹೇಳಿದರು.
ಆತನಿಗೆ ಇತಿಹಾಸ ಗೊತ್ತಿಲ್ಲ ಪಾಪ
ನಾಟಿ ಬ್ರೀಡ್ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ, ಯಾರು ನಾಟಿ? ಚಲುವರಾಯಸ್ವಾಮಿ ಅವರಿಗೆ ಒಂದು ಮಾತು ಹೇಳಿ. ನಾಗಮಂಗಲ ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಸೇರಿರೋದು. ನಾವು ಹಾಸನ ಜಿಲ್ಲೆಯಲ್ಲಿ ಇದ್ವಿ, ಆತನಿಗೆ ಇತಿಹಾಸ ಗೊತ್ತಿಲ್ಲ ಪಾಪ. ಹಾಗಾದ್ರೆ, ನಮ್ಮನ್ನ ಹೊರಗಿನವರು ಅಂತಾರಾ? ಅಧಿಕಾರ, ಹಣ ಇದೆ, ಹಣ ಇರುವವರು ಇದ್ದಾರೆ ಮಾತನಾಡಲಿ ಎಂದು ಸುರೇಶ್ ಗೌಡ ಚಾಟಿ ಬೀಸಿದರು.