ಉಡುಪಿ : ಅಂಬೇಡ್ಕರ್ ಅವರ ಸಂವಿಧಾನ, ಬಿಜೆಪಿಯ ಒಟ್ಟು ಆಶಯದಿಂದ ಇದೆಲ್ಲ ಸಾಧ್ಯವಾಯ್ತು. ಸಮಾಜದ ಕೊನೆಯ ಮನುಷ್ಯನಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾವುಕರಾದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸದಸ್ಯನಾಗಿ ನಾನು ಕೆಲಸ ಮಾಡಿಕೊಂಡಿದ್ದೆ. ಇಂದು ಸಂಸತ್ ಪ್ರವೇಶ ಮಾಡೋಕೆ ಪಕ್ಷ ಟಿಕೆಟ್ ಕೊಟ್ಟಿದೆ, ಇದು ಸಣ್ಣ ವಿಚಾರ ಅಲ್ಲ ಎಂದರು.
ಬಹಳ ಶ್ರದ್ಧೆಯಿಂದ, ಪುನೀತನಾಗಿ ಈ ಅವಕಾಶವನ್ನು ಸ್ವೀಕರಿಸಿ, ಸ್ಪರ್ಧೆಗೆ ಧುಮುಕುತ್ತಿದ್ದೇನೆ. ಬಿಜೆಪಿಯ ಸಂಘಟನೆ, ಪ್ರಧಾನಿ ಮೋದಿಯ ಕಾರ್ಯ ಶೈಲಿ ಸಂಸದನಾಗಿ ಆಯ್ಕೆಮಾಡಲಿದೆ. ಟಿಕೆಟ್ ಆದಮೇಲೆ ಬಿಜೆಪಿಯೊಳಗೆ ಬೇಸರ ಅಸಮಾಧಾನ, ಚರ್ಚೆ ಆಗಲ್ಲ. ಅಭ್ಯರ್ಥಿ ಎಂದು ಘೋಷಣೆಯಾದ ಮೇಲೆ ಎಲ್ಲಾ ನಾಯಕರು ಶುಭ ಕೋರಿದ್ದಾರೆ. ಸಿ.ಟಿ. ರವಿ, ಪ್ರಮೋದ್ ಮಧ್ವರಾಜ್, ಉದಯ ಶೆಟ್ಟಿ, ಶೋಭಾ ಕರಂದ್ಲಾಜೆ ಹಾರೈಸಿದ್ದಾರೆ ಎಂದು ಹೇಳಿದರು.
ನನ್ನನ್ನು ಚಿಕ್ಕಮಗಳೂರಿಗ ಎಂದು ತಿಳಿದುಕೊಳ್ಳಿ
ಸಂಘಟನೆ, ನಾಯಕತ್ವ ಗಟ್ಟಿ ಇದೆ ನಿಶ್ಚಿತವಾಗಿ ಗೆಲ್ಲುತ್ತೇವೆ. ನನ್ನನ್ನು ಚಿಕ್ಕಮಗಳೂರಿಗ ಎಂದು ತಿಳಿದುಕೊಳ್ಳುವುದಾಗಿ ಅಲ್ಲಿನ ನಾಯಕರು ಹೇಳಿದ್ದಾರೆ. ಪಕ್ಷ ಸಾಮಾಜಿಕ ನ್ಯಾಯದ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಿದೆ. ಈ ಚುನಾವಣೆ ರಾಷ್ಟ್ರೀಯತೆಯ ವಿಚಾರದಲ್ಲಿ ಮುನ್ನಡೆಯುತ್ತದೆ. ನನ್ನ ಮಿತಿಯಲ್ಲಿ ನಾನು ಪಕ್ಷಕ್ಕೆ ನಿಷ್ಟನಾಗಿ ಕೆಲಸ ಮಾಡಿದ್ದೇನೆ. ಮೋದಿ ಪ್ರಧಾನಿಯಾಗಲು ನನಗೊಂದು ಕೈ ಎತ್ತಲು ಅವಕಾಶ ಜನಕೊಡಬಹುದಾ? ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.