ಕಲಬುರಗಿ : ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಕೋಟಾ ರೈಲು ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಸಂಸದ ಉಮೇಶ್ ಜಾಧವ್ ವಂದೇ ಭಾರತ್ ಡಕೋಟಾ ರೈಲಿಗೆ ಚಾಲನೆ ನೀಡಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.
ಇದರ ಬದಲಿಗೆ ರೈಲ್ವೆ ಡಿವಿಜನ್ ತಂದಿದ್ರೆ ಈ ಭಾಗಕ್ಕೆ ಅನುಕೂಲ ಆಗ್ತಿತ್ತು. ಉಮೇಶ್ ಜಾಧವ್, ಆರ್. ಅಶೋಕ ಸೇರಿದಂತೆ ಬಿಜೆಪಿ ನಾಯಕರಿಗೆ ನಾನೇ ಮನೆ ದೇವರಾಗಿರುವೆ. ದಿನಾಲು ನನ್ನ ಹೆಸರು ಜಪಿಸಲಿಲ್ಲ ಅಂದ್ರೆ, ಅವರಿಗೆ ತಿಂದ ಅನ್ನ ಜೀರ್ಣ ಆಗಲ್ಲ. ಅವರಿಗೆ ನಿದ್ರೆ ಬರಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೋರ್ಟ್ ಕೇಂದ್ರಕ್ಕೆ ತರಾಟೆ ತಗೊಂಡಿದೆ
ಸಿಎಎ ಜಾರಿ ವಿಚಾರ ಕುರಿತು ಮಾತನಾಡಿದ ಅವರು, ಎಲೆಕ್ಟ್ರಾಲ್ ಬಾಂಡ್ ವಿಚಾರಕ್ಕೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತರಾಟೆಗೆ ತೆಗೆದುಕೊಂಡಿದೆ. ಬಾಂಡ್ ನೀಡಿರುವ ಉದ್ಯಮಿಗಳ ಪಟ್ಟಿ ಸಲ್ಲಿಸುವಂತೆ ಕೋರ್ಟ್ ಖಡಕ್ ಸೂಚನೆ ನೀಡಿದ್ದಲ್ಲದೇ ಛೀಮಾರಿ ಹಾಕಿದೆ. ಇದನ್ನು ಮುಚ್ಚಿ ಹಾಕಲು, ಜನರ ಗಮನ ಇದರಿಂದ ತಪ್ಪಿಸಲು ಸಿಎಎ ಜಾರಿ ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.