ಆನೇಕಲ್ : ಪ್ರಜ್ವಲ್ ರೇವಣ್ಣ ಪ್ರಕರಣ ಸುದ್ದಿಯಲ್ಲಿರುವಾಗಲೇ ಹಲವೆಡೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬರುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ಈ ಹೇಯ ಕೃತ್ಯ.
ಎರಡು ಮಕ್ಕಳ ತಾಯಿಗೆ (ಮಹಿಳೆಗೆ) ಗ್ರಾಮ ಪಂಚಾಯಿತಿ ಸದಸ್ಯನ ಮಗ ಸೇರಿದಂತೆ ಇಬ್ಬರು ಯುವಕರು ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂಬ ಪ್ರಕರಣ ಬೆಳಕಿಗೆ ಬಂದಿದೆ. ಆನೇಕಲ್ ಉಪ ವಿಭಾಗದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.
ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಬ್ಯಾಟರಾಯನ ದೊಡ್ಡಿಯಲ್ಲಿ ಈ ಘಟನೆ ನಡೆದಿದೆ. ಅದೇ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ಸಿದ್ದರಾಜು ಎಂಬ ಇಬ್ಬರು ಯುವಕರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಪಾಪಿಗಳು.
ತನ್ನ ಜೊತೆ ಬಂದು ಮಲಗುವಂತೆ ಕಾಟ
ಕಳೆದ ವರ್ಷದಿಂದ ಆಗಾಗ್ಗೆ ಯುವಕರು ನನಗೆ ಕರೆ ಮಾಡುತ್ತಿದ್ದರು. ತನ್ನ ಜೊತೆ ಬಂದು ಮಲಗುವಂತೆ ಕಾಟ ನೀಡುತ್ತಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಬಾರದು ಎಂದು ಸಾಕಷ್ಟು ಬೆದರಿಕೆಯನ್ನು ಸಹ ಹಾಕಿದ್ದಾರೆ. ಅಲ್ಲದೆ, ಒಂದು ವೇಳೆ ತಮಗೆ ಏನಾದರೂ ಆದರೆ ಅದಕ್ಕೆ ಕಾರಣ ಸಿದ್ದರಾಜು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಎಂದು ಸಂತ್ರಸ್ಥೆ ಎಂದು ಆರೋಪಿಸಿ ಮಹಿಳೆ ಬನ್ನೇರುಘಟ್ಟ ಠಾಣೆ ಮೆಟ್ಟಿಲೇರಿದ್ದಾರೆ.
ರಾಜಿ ಪಂಚಾಯಿತಿ ಆದ್ರೂ ಬಿಡದ ಯುವಕರು
ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳು ಇದ್ದಾರೆ. ಇಬ್ಬರು ಆರೋಪಿಗಳಲ್ಲಿ ವಿವೇಕ್ ಎಂಬಾತ ಗ್ರಾ.ಪಂ ಸದಸ್ಯ ಚಂದ್ರು ಅವರ ಮಗ. ಕಳೆದ ಒಂದು ವರ್ಷದಿಂದ ಇದೇ ರೀತಿ ಮಹಿಳೆಗೆ ಇಬ್ಬರು ಯುವಕರು ಕಿರುಕುಳವನ್ನು ಕೊಟ್ಟಿದ್ದು, ಈ ಬಗ್ಗೆ ಕಳೆದ ಬಾರಿ ಚಂದ್ರು ರಾಜಿ ಪಂಚಾಯಿತಿ ಸಹ ಮಾಡಿದ್ದರು. ಆದರೂ ಯುವಕರು ಕಿರುಕುಳ ಕೊಡುವುದನ್ನು ಬಿಟ್ಟಿರಲಿಲ್ಲ ಎನ್ನಲಾಗಿದೆ.