ಕೊಡಗು: ಮದುವೆ ಊಟದಲ್ಲಿ ಸ್ವೀಟ್ ಹಾಕಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಎರಡು ಕುಟುಂಬಗಳು ಮದುವೆಯನ್ನೇ ರದ್ದು ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾನಗಲ್ಲಿ ಗ್ರಾಮದಲ್ಲಿ ನಡೆದಿದೆ.
ಸೋಮವಾರಪೇಟೆ ಹಾನಗಲ್ಲಿ ಮೂಲದ ವಧು ಮತ್ತು ತುಮಕೂರು ಮೂಲದ ವರ ಇಬ್ಬರ ಮದುವೆ ನಿಶ್ಚಯವಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಭಾನುವಾರ ನಡೆಯುತ್ತಿತ್ತು. ಈ ವೇಳೆ ಮದುವೆ ಊಟದಲ್ಲಿ ಸ್ವೀಟ್ ಹಾಕಿಲ್ಲ ಎನ್ನುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನೂಕಾಟ, ತಳ್ಳಾಟ ನಡೆದಿತ್ತು ಇದೇ ವಿಚಾರಕ್ಕೆ ಮದುಮಗ ನಿಶ್ಚಿತಾರ್ಥದ ಉಂಗುರವನ್ನು ಕಳಚಿ ಹುಡುಗಿಗೆ ಕೊಟ್ಟಿದ್ದ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಪ್ರೇಮಿಗಳ ಸರಸ: ಜನರಿಂದ ಭಾರಿ ಆಕ್ರೋಶ
ಜಗಳ ವಿಕೋಪಕ್ಕೆ ತಿರುಗಿ ಎರಡು ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದವು ಬಳಿಕ ಮದುಮಗ ಹುಡುಗಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಇಷ್ಟೆಲ್ಲ ಅವಾಂತರಗಳು ಸೃಷ್ಟಿಯಾದ ಮೇಲೆ ಹುಡುಗಿ ಬೇಸತ್ತು ಮದುವೆ ನಿರ್ಧಾರದಿಂದ ಹಿಂದೆ ಸರಿದಿದ್ದಾಳೆ. ಇದರೊಂದಿಗೆ ಹೊಸ ಬಾಳಿನ ಕನಸು ಕಾಣುತ್ತಿದ್ದ ಜೋಡಿಗಳ ಮದುವೆ ಮುರಿದುಬಿದ್ದು ಬೇರೆಯಾಗಿದ್ದಾರೆ.