ಹಾಸನ : ಹೆಚ್.ಡಿ. ರೇವಣ್ಣ ಅವರನ್ನು ದುರುದ್ದೇಶದಿಂದ ಸಿಲುಕಿಸಲಾಗಿದೆ. ಅವರನ್ನು ಬಂಧಿಸುವ ಅಗತ್ಯ ಇರಲಿಲ್ಲ. ಅವರು ತನಿಖೆಗೆ ಸಹಕಾರ ಕೊಡುತ್ತಿದ್ದರು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ದೇವೇಗೌಡರ ಮನೆಯಲ್ಲಿ ರೇವಣ್ಣ ಅಡಗಿದ್ದರು ಎನ್ನುವುದು ಸುಳ್ಳು. ಅವರು ಮಾಮೂಲಿಯಾಗಿ ಅಲ್ಲಿದ್ದರು ಅಷ್ಟೇ ಎಂದು ತಿಳಿಸಿದ್ದಾರೆ.
ನಿನ್ನೆ ಶಾಸಕರು, ಮಾಜಿ ಶಾಸಕರು ಹಾಗೂ ಪ್ರಮುಖರ ಸಭೆ ನಡೆಸಲಾಗಿದೆ. ಪೆನ್ ಡ್ರೈವ್ ವಿಚಾರದ SIT ತನಿಖೆಗೆ ಎಲ್ಲರ ಸ್ವಾಗತವಿದೆ. ಆದರೆ, SIT ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಅನಿಸುತ್ತಿದೆ. ರೇವಣ್ಣ ಅವರು ಈ ಜಿಲ್ಲೆಯ ಅಭಿವೃದ್ಧಿ ಮಾಡಿ ಜನರ ಮನಸ್ಸಿನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ಪೆನ್ಡ್ರೈವ್ ಹರಿಬಿಟ್ಟವರನ್ನು ಪತ್ತೆ ಮಾಡುವ ಬದಲು ನಮ್ಮ ನಾಯಕರನ್ನ ಬಂಧಿಸಿದ್ದಾರೆ. ಮೊದಲ ಕೇಸ್ನಲ್ಲಿ ಏನೂ ಮಾಡಲು ಆಗಿಲ್ಲ ಎಂದು, ಎರಡನೇ ಕೇಸ್ ದಾಖಲು ಮಾಡಲಾಗಿದೆ. ಕೆ.ಆರ್. ನಗರ ಶಾಸಕರ ಚಿತಾವಣೆಯಿಂದ ಅಲ್ಲಿ ಕೇಸ್ ದಾಖಲಾಗಿದೆ ಎಂದು ಆರೋಪಿಸಿದ್ದಾರೆ.
ಮಹಿಳೆ ರೇವಣ್ಣ ಬಗ್ಗೆ ಏನು ಹೇಳಿಲ್ಲ
ಅಪಹರಣಕ್ಕೆ ಒಳಗಾದ ಮಹಿಳೆ ಕೂಡ ರೇವಣ್ಣ ಬಗ್ಗೆ ಏನು ಹೇಳಿಲ್ಲ. ಆದರೂ ಕೂಡ ಹತಾಶ ಭಾವನೆಯಿಂದ ಅವರ ಹೇಳಿಕೆಗೂ ಮೊದಲು ಬಂಧನ ಮಾಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ತೊಂದರೆ ನೀಡಿದರೆ ನಮ್ಮ ಪ್ರಭಾವ ಹೆಚ್ಚಾಗುತ್ತೆ ಅನ್ನೋದು ಸಾಧ್ಯವಿಲ್ಲ. ನಾವು ನಮ್ಮ ನಾಯಕರ ಜೊತೆ ಇದ್ದೇವೆ, ಸತ್ಯ ಹೊರ ಬರಲಿದೆ. ಈ ಘಟನೆಯನ್ನು ಜೆಡಿಎಸ್ ಖಂಡಿಸುತ್ತೇವೆ. ನಾವು ಪ್ರತಿಭಟನೆ ಕರೆ ಕೊಡಬಹುದಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಇದೆ. ವ್ಯತಿರಿಕ್ತ ಪರಿಣಾಮ ಆಗಬಾರದು ಅಂತ ಸುಮ್ಮನಿದ್ದೇವೆ ಎಂದು ಲಿಂಗೇಶ್ ಹೇಳಿದ್ದಾರೆ.