ಮೈಸೂರು : ನಿನ್ನೆ ಸುರಿದ ಧಾರಾಕಾರ ಮಳೆ ಮೈಸೂರಿನ ವಿವಿಧೆಡೆ ಅವಾಂತರ ಸೃಷ್ಟಿಸಿದೆ. ಮೊದಲ ಮಳೆ ಬಂತು ಎನ್ನುವ ಖುಷಿ ಒಂದು ಕಡೆಯಾದರೆ, ಮತ್ತೊಂದು ಕಡೆ ರೈತನ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಶಿಂಡೇನಹಳ್ಳಿ ಗ್ರಾಮದ ಬಸವೇಗೌಡ ಅವರಿಗೆ ಸೇರಿದ 4 ಎಕರೆ ಬಾಳೆ ಸಂಪೂರ್ಣ ನಾಶವಾಗಿದೆ. ಅದೇ ಗ್ರಾಮದ ಬಸವರಾಜು ಎಂಬುವವರಿಗೆ ಸೇರಿದ ಎರಡು ಎಕರೆ ಬಾಳೆ ಫಸಲು ಕೂಡ ಮಳೆ ಗಾಳಿಗೆ ನೆಲಕಚ್ಚಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸತ್ತೇಗಾಲ ವ್ಯಾಪ್ತಿಯ ವಿವಿಧಡೆ ಗುಡುಗು ಸಹಿತ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಕೆಲವೆಡೆ ಅಪಾರ ಪ್ರಮಾಣದ ಬೆಳೆ ಹಾಗೂ ಮನೆಗಳ ಮೇಲ್ಚಾವಣಿ ನಾಶವಾಗಿದೆ. ಹಾನಿಯಾದ ಜಮೀನು ಹಾಗೂ ಮನೆಗಳಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿಯಲ್ಲಿ 44 ಡಿಗ್ರಿ ತಾಪಮಾನ
ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬಿಸಿಲ ತಾಪಕ್ಕೆ ಕಲಬುರಗಿ ಮಂದಿ ತತ್ತರಿಸಿದ್ದಾರೆ. ಇನ್ನು ನಾಳೆ ಮಧ್ಯಾಹ್ನ 2.40 ರವರೆಗೆ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹಾಗೂ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು IMD ತಿಳಿಸಿದೆ.