ಹಾಸನ : ಸಂಸದ ಪ್ರಜ್ವಲ್ ರೇವಣ್ಣ ತಪ್ಪಿತಸ್ಥರಿದ್ದರೆ ವಿದೇಶದಿಂದ ಕರೆತರಲಿ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂದು ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಅಶ್ಲೀಲ ವೀಡಿಯೋ ಹರಿಯಬಿಟ್ಟವರು ಯಾರು ಎನ್ನುವುದು ಹೊರ ಬರಬೇಕು. ಇದು ಈ ಜಿಲ್ಲೆಯ ಹೆಣ್ಣು ಮಕ್ಕಳ ಪ್ರಶ್ನೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸತ್ಯ ಬೇಗನೆ ಹೊರ ಬರಬೇಕು. ನಾವು ಯಾರನ್ನು ಸಮರ್ಥನೆ ಮಾಡಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. SIT ರೇವಣ್ಣ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠರು ಕೂಡ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ರೇವಣ್ಣರನ್ನ ಕೂಡಲೇ ಬಿಡುಗಡೆ ಮಾಡಲಿ
ಕೆಲವರಿಗೆ ವಿಡಿಯೋ ಇದೆ ಎಂದು ಬ್ಲಾಕ್ ಮೇಲ್ ಮಾಡುತ್ತಿರುವ ವರದಿಯಿದೆ. ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಹಾಗಾಗಿ, ಈ ಬಗ್ಗೆ ಕಠಿಣ ಕ್ರಮ ಆಗಲೇಬೇಕು. ಸತ್ಯಾಸತ್ಯತೆಯನ್ನು ಪ್ರಮಾಣಿಕವಾಗಿ SIT ಹೊರ ತರಬೇಕು. ರೇವಣ್ಣ ಅವರ ಬಂಧನ ಸೂಕ್ತವಲ್ಲ ಎಂದು ಚರ್ಚೆ ಆಗುತ್ತಿದೆ. ಹೀಗಾಗಿ, ರೇವಣ್ಣ ಅವರನ್ನು ಕೂಡಲೇ ಬಿಡುಗಡೆ ಮಾಡಲಿ ಎಂದು ಹೇಳಿದ್ದಾರೆ.
ಪೆನ್ ಡ್ರೈವ್ ರಾಜಕೀಯ ದುರುದ್ದೇಶಕ್ಕೆ ಬಳಕೆ
ಪೆನ್ಡ್ರೈವ್ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ರೇವಣ್ಣ ಅವರು ಎಲ್ಲಿಯೂ ಅಡಗಿ ಕೂತಿಲ್ಲ. ಕೇಸ್ ದಾಖಲು ಆದಾಗಿನಿಂದಲು ಕೂಡ ಕ್ಷೇತ್ರದಲ್ಲಿ ಇದ್ದಾರೆ. ರೇವಣ್ಣ ಅವರ ಬಂಧನದ ಅವಶ್ಯಕತೆ ಇರಲಿಲ್ಲ. ವಿಚಾರಣೆಗೆ ಕರೆಯಬಹುದಿತ್ತು, ಕೂಡಲೇ SIT ರೇವಣ್ಣ ಅವರನ್ನು ಬಿಡುಗಡೆ ಮಾಡಬೇಕು. ಅವರು ಎಲ್ಲಾ ರೀತಿಯ ತನಿಖೆಗೆ ಸಹಕಾರ ಮಾಡ್ತಾರೆ. ಜಿಲ್ಲೆಗೆ, ರಾಜ್ಯಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದ್ದಾರೆ.