ಕಾರವಾರ : ಕಾಂಗ್ರೆಸ್ನವರು ಬುದ್ದಿವಂತರು. ಅದಕ್ಕೇ ಯಾರನ್ನೇ ಅಭ್ಯರ್ಥಿಯಾಗಲು ಕೇಳಿದ್ರೂ ಕರಿಮಣಿ ಮಾಲೀಕ ನಾನಲ್ಲ ಅಂತಾರೆ ಎಂದು ಸಂಸದ ಅನಂತಕುಮಾರ್ ಹೆಗಡೆ ಲೇವಡಿ ಮಾಡಿದರು.
ಕಾರವಾರದಲ್ಲಿ ಮಾತನಾಡಿದ ಅವರು, ಯಾರ ಕೈಗೆ ಕರಿಮಣಿ ಕೊಟ್ಟರೂ, ಕಟ್ಟಲು ಯಾರೂ ರೆಡಿಯಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾವತ್ತೂ ಹೆಸರು ಕೂಡಾ ಕೊಡಬಾರದು, ಆ ಸ್ಥಿತಿ ತರಬೇಕು ಎಂದು ಕುಟುಕಿದರು.
ಕಾಂಗ್ರೆಸ್ ಕಿತ್ತೊಗೆಯುವಂತೆ ಕರೆ ಕೊಟ್ಟ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಒಮ್ಮೆ ಮೂಲೋತ್ಪಾಟನೆ ಆಗಬೇಕು. ಒಮ್ಮೆ ಕ್ರಾಂತಿ ಆದ್ರೇನೇ, ಜಗತ್ತಿನಲ್ಲಿ ಶಾಂತಿ ನೆಲೆಸೋದು. ಕ್ರಾಂತಿ ಇಲ್ಲದೇನೆ ಶಾಂತಿ ಶಾಶ್ವತವಾಗಿ ನೆಲೆಸೋದಿಲ್ಲ. ಒಮ್ಮೆ ಕಾಂಗ್ರೆಸ್ ಅನ್ನ ಕಿತ್ತೊಗೆಯೋತಕ್ಕಂತ ಕ್ರಾಂತಿ ಈ ನೆಲದಲ್ಲಿ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ದಮ್ ಇದ್ರೆ ಶ್ವೇತಪತ್ರ ಹೊರಡಿಸಲಿ
ಬಿಜೆಪಿಯ 10 ವರ್ಷದ ಅಧಿಕಾರದಲ್ಲಿ ಜಗತ್ತಿನ ಆರ್ಥಿಕತೆಯ ಕೇಂದ್ರವಾಗಿ ಭಾರತ ಬೆಳೆಯುತ್ತಿದೆ. ಸಿದ್ದರಾಮಯ್ಯನವರ ಸರ್ಕಾರ ಬಂದು ಒಂದು ವರ್ಷವಾಗಿಲ್ಲ, ಸರ್ಕಾರಿ ನೌಕರರಿಗೆ ವೇತನ ಕೊಡಲು ದುಡ್ಡಿಲ್ಲ. ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತಂತೆ ಶ್ವೇತಪತ್ರ ಹೊರಡಿಸಲಿ ನೋಡೋಣ. ಸಿದ್ದರಾಮಯ್ಯರಿಗೆ ನಿಜಕ್ಕೂ ದಮ್ ಇದ್ರೆ, ಪ್ರಾಮಾಣಿಕತೆ ಇದ್ರೆ, ಆರ್ಥಿಕತೆಯ ಕಳಕಳಿಯಿದ್ರೆ ಶ್ವೇತಪತ್ರ ಹೊರಡಿಸಲಿ. ಆಗ ಕಳೆದ ಒಂದು ವರ್ಷದಲ್ಲಿ ಇವರು ಕಡಿದಿದ್ದೇನು ಅಂತ ಗೊತ್ತಾಗತ್ತೆ ಎಂದು ಸವಾಲ್ ಹಾಕಿದರು.
ಜೀವನದಲ್ಲಿ ನಿಜ ಹೇಳಿದ್ರೆ ಅದೊಂದೇ
ಈ ಚುನಾವಣೆ ತನಕ ಹಾಗೋ, ಹೀಗೋ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ನಡೆಸಬಹುದು. ಆದರೆ, ಅದರ ನಂತರ ಕಾಂಗ್ರೆಸ್ಸಿಗೆ ಕರ್ನಾಟಕ ಸರ್ಕಾರವನ್ನ ನಡೆಸಲಾಗುವುದಿಲ್ಲ. ಕಾಂಗ್ರೆಸ್ ಗೆದ್ದು ಸಿಎಂ ಆದಾಗ ಸಿದ್ದರಾಮಯ್ಯನವರೇ ಹೇಳಿದ್ದನ್ನೆಲ್ಲಾ ಮಾಡೋಕಾಗತ್ತಾ? ಎಂದಿದ್ರು. ಬಹುತೇಕ ಸಿದ್ದರಾಮಯ್ಯ ಜೀವನದಲ್ಲಿ ನಿಜ ಹೇಳಿದ್ರೆ ಅದೊಂದೇನೇ.. ಸದ್ಯ ಬಿಜೆಪಿ ಪರ ಗೆಲುವಿನ ವಾತಾವರಣ ನಿರ್ಮಾಣವಾಗಿದೆ ಎಂದು ಅನಂತಕುಮಾರ್ ಹೆಗಡೆ ಚಾಟಿ ಬೀಸಿದರು.