ದಾವಣಗೆರೆ : ಕಾಂಗ್ರೆಸ್ ಪಕ್ಷದಲ್ಲಿ 5 ವರ್ಷ ದೇಶ ಆಳಬಲ್ಲವರು ಯಾರಿದ್ದಾರೆ? ಅಂತಹ ವ್ಯಕ್ತಿಯೇ ಇಲ್ಲದೇ ದೇಶವನ್ನು ಹೇಗೆ ಆಳುತ್ತಾರೆ? ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, 5 ವರ್ಷ ದೇಶದ ಚುಕ್ಕಾಣಿಯನ್ನು ಯಾರಿಗೆ ಕೊಡಬೇಕು? ಈ ಬಗ್ಗೆ ಎಲ್ಲರೂ ಯೋಚನೆ ಮಾಡಿ ಮತ ಕೊಡುತ್ತೀರಲ್ವಾ? ಎಂದು ಪ್ರಶ್ನಿಸಿದರು.
ಒಂದು ವರ್ಷ ಒಬ್ಬ ಪ್ರಧಾನಿಗಾಗಿ ಕಾಂಗ್ರೆಸ್ ಮೈತ್ರಿ ಪ್ಲ್ಯಾನ್ ಮಾಡುತ್ತಿದೆ. ಒಂದೊಂದು ವರ್ಷ ಒಂದು ಪಕ್ಷದವರಿಗೆ ನಾಯಕತ್ವ ನೀಡಲಿದೆ. ಅಂಥವರು ದೇಶದ ಅಭಿವೃದ್ಧಿ ಮಾಡಲು ಸಾಧ್ಯ ಇದೆಯಾ? ಹೊಸ ಶಿಕ್ಷಣ ನೀತಿಗೆ ಕಾಂಗ್ರೆಸ್ ಲಗಾಮು ಹಾಕಿದೆ. ಕರ್ನಾಟಕದ ಮುಖ್ಯಸ್ಥರ ನೇತೃತ್ವದಲ್ಲಿ ಶಿಕ್ಷಣ ನೀತಿ ರಚನೆ ಮಾಡಲಾಗಿತ್ತು. ಆದ್ರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ನಿಲ್ಲಿಸಿದೆ ಎಂದು ಕುಟುಕಿದರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನೇ ನಿಲ್ಲಿಸಿದೆ
ಕರ್ನಾಟಕವನ್ನು ಕಾಂಗ್ರೆಸ್ ಮತ್ತಷ್ಟು ಹಿಂದೆ ತಳ್ಳುತ್ತಿದೆ. 2047ರ ವೇಳೆ ಅಭಿವೃದ್ಧಿಯ ದೇಶಕ್ಕಾಗಿ 24X7 ಕೆಲಸ ಮಾಡುವೆ. ಆದ್ರೆ ಕಾಂಗ್ರೆಸ್ ಅಭಿವೃದ್ಧಿಗೆ ಬ್ರೇಕ್ ಹಾಕುತ್ತಲೇ ಇರುತ್ತದೆ. ರಾಜ್ಯದ ಅಭಿವೃದ್ಧಿಗೆ ಯಡಿಯೂರಪ್ಪ, ಬೊಮ್ಮಾಯಿ ಕೆಲಸ ಮಾಡಿದ್ದಾರ. ಈಗ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನೇ ನಿಲ್ಲಿಸಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ನಲ್ಲಿ ವಿಷನ್ ಇಲ್ಲ. ಯುವಕರು, ರೈತರು, ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಚಾಟಿ ಬೀಸಿದರು.
2014, 2019ಕ್ಕಿಂತ ಹೆಚ್ಚಾಗಿ ಆಶೀರ್ವಾದ ಮಾಡಿ
10 ವರ್ಷಗಳ ಕಾಲ ಜನರು ನರೇಂದ್ರ ಮೋದಿಯನ್ನ ಗಮನಿಸಿದ್ದಾರೆ. ದೇಶಕ್ಕಾಗಿ ಮೋದಿ ಕ್ಷಣ ಕ್ಷಣವನ್ನೂ ಸಮರ್ಪಿಸಿದ್ದನ್ನ ನೋಡಿದ್ದಾರೆ. ಇವತ್ತು ಬಂದಿರುವ ಮೋದಿ ನೀವೆಲ್ಲರೂ ಅರಿತಿರುವ ಮೋದಿ. ನಿಮ್ಮಲ್ಲಿ ಇರುವ ಆ ವಿಶ್ವಾಸವನ್ನು ನಾನು ನೋಡುತ್ತಿದ್ದೇನೆ. 2014, 2019ಕ್ಕಿಂತ ಹೆಚ್ಚಾಗಿ ನೀವು ಆಶೀರ್ವಾದ ಮಾಡುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.