ವಿಜಯಪುರ : ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದು ಎಂಬ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಯಾವಾಗ ಯಾವಾಗ ಏನೇನು ಮಾತನಾಡಿದ್ದಾರೆ ಎಂಬುದು ನೋಡಲು ಒಂದು ಸೆಲ್ ಇಡಬೇಕಾಗುತ್ತದೆ. ಬೆಳಗ್ಗೆ ಒಂದು, ಮಧ್ಯಾಹ್ನ, ಸಂಜೆ ಒಂದೊಂದು ಮಾತನಾಡುತ್ತಾರೆ ಎಂದು ಕುಟುಕಿದರು.
ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಏನು ಭವಿಷ್ಯ ಹೇಳುತ್ತಾರೆಯೇ?. 135 ಸೀಟು ಇದೆ, ಸರ್ಕಾರ ಉರುಳಿಸಲು 55 ರಿಂದ 60 ಶಾಸಕರುಗಳು ಬೇಕು. ಇದರಲ್ಲಿ ಸಾಕು ಐದಾರು ಜನ ಶಾಸಕರನ್ನು ತಂದು ತೋರಿಸಲಿ ಮೋದಲು ಎಂದು ಸವಾಲ್ ಹಾಕಿದರು.
ಅವ್ರನ್ನು ದೇಶದಿಂದ ಗಡಿಪಾರು ಮಾಡಬೇಕು
ನಾಸೀರ್ ಹುಸೇನ್ ಪರ ಬ್ಯಾಟಿಂಗ್ ಮಾಡಿದ ಅವರು, ಯಾರೋ ಒಬ್ಬನು ಘೋಷಣೆ ಕೂಗಿದ್ರೆ ಅವರನ್ಯಾಕೆ (ನಾಸೀರ್ ಹುಸೇನ್) ಜವಾಬ್ದಾರಿ ಮಾಡೋದು..? ಯಾರು ಕೂಗಿದ್ದಾರೆ ಅದು ಘೋರ ಅಪರಾಧ. ನಾನು ಬಬಲೇಶ್ವರಕ್ಕೆ ಹೋಗುತ್ತಿದ್ದೇನೆ ಅಲ್ಲಿ 10 ಸಾವಿರ ಜನ ಇರುತ್ತಾರೆ, ಆಗ ಘೋಷಣೆ ಕೂಗಿದರೆ..? ಇದು ಎಂ.ಬಿ ಪಾಟೀಲ್ರಿಗೆ ಸಂಬಂಧಿಸಿದ್ದಾ..? ಯಾರು ಕೂಗಿದ್ದಾರೆ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಎಂ.ಬಿ. ಪಾಟೀಲ್ ಹೇಳಿದರು.