ಶಿವಮೊಗ್ಗ : ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡ್ತಾ ಇದ್ದೇವೆ. ಮತ್ತೊಮ್ಮೆ ದೆಹಲಿಗೆ ಹೋಗಿ ಪ್ರಯತ್ನ ಮುಂದುವರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಕಾಂತೇಶ್ಗೆ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ ಮಾತನಾಡಿ, ನನ್ನ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಟಿಕೆಟ್ ಯಾರಿಗೆ ನೀಡಬೇಕೆಂದು ಚುನಾವಣಾ ಸಮಿತಿ ತೀರ್ಮಾನ ಮಾಡಲಿದೆ ಎಂದರು.
ನಾಳೆ ದೆಹಲಿಯಲ್ಲಿ ನಿಗಧಿಯಾಗಿದ್ದ ಚುನಾವಣಾ ಸಮಿತಿ ಸಭೆ ಮುಂದೂಡಲಾಗಿದೆ. ಇದರಿಂದ ನಾನು ದೆಹಲಿಗೆ ಹೋಗುತ್ತಿಲ್ಲ. ನಾಳೆ ಶಿವಮೊಗ್ಗದಲ್ಲೇ ಚುನಾವಣೆ ತಯಾರಿ ನಡೆಸುತ್ತೇನೆ. ರಾಜ್ಯದಲ್ಲಿ ವಾತಾವರಣ ತುಂಬಾ ಚೆನ್ನಾಗಿದೆ. 28 ಲೋಕಸಭ ಕ್ಷೇತ್ರದಲ್ಲಿ 25ರಲ್ಲಿ ಗೆಲ್ಲಲು ಶ್ರಮ ಹಾಕುತ್ತೇವೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಬೇಸರ ವ್ಯಕ್ತಪಡಿಸಿದರೆ ಸರಿದೂಗಿಸುತ್ತೇವೆ
ರಾಜಕೀಯ ಪಕ್ಷದಲ್ಲಿ ಸ್ವಾಭಾವಿಕವಾಗಿ ಟಿಕೆಟ್ ಹಂಚಿಕೆಗೂ ಮುನ್ನ ಗೊಂದಲ ಇರುತ್ತದೆ. ಒಂದು ಸಲ ಪಟ್ಟಿ ಬಿಡುಗಡೆಯಾದ ಮೇಲೆ ಎಲ್ಲರೂ ಹೊಂದುಕೊಂಡು ಹೋಗುತ್ತೇವೆ. ನಮ್ಮ ಉದ್ದೇಶ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂಬುದು, ಅದೇ ನಮ್ಮ ಬಯಕೆ. ಇದರಿಂದ ಯಾರು ಸಹ ಟಿಕೆಟ್ ಹಂಚಿಕೆ ನಂತರ ವಿರೋಧ ವ್ಯಕ್ತಪಡಿಸುವುದಿಲ್ಲ. ಯಾರಾದರೂ ಬೇಸರ ವ್ಯಕ್ತಪಡಿಸಿದರೆ ಅದನ್ನು ಸರಿದೂಗಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.