ಬೆಳಗಾವಿ : ನಮಗೆ ಮೆಜಾರಿಟಿ ಬಂದಾಗಲೇ ಅಭಿವೃದ್ಧಿ ಕೆಲಸದ ಬಗ್ಗೆ ಗೊತ್ತಾಗುತ್ತೆ. ಆಗ ನಮ್ಮ ತಲ್ವಾರ್ನ ತೂದಿ ಹೇಗೆ ಜಳಪಿಸುತ್ತೆ ನೋಡಿ. ಆಗ ನೋಡಿ ಮಾರಿ ಹಬ್ಬ ಆರಂಭ ಆಗುತ್ತದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅದಕ್ಕಾಗಿ ಬಿಜೆಪಿ ನಿಮ್ಮಲ್ಲಿ ವಿನಂತಿ ಮಾಡುತ್ತೆ, ಪ್ರತಿಯೊಂದು ವೋಟಿನಲ್ಲೂ ಮಹತ್ವದ ಇದೆ. ಐದರಿಂದ 10 ದಿನಗಳ ಅವಧಿಯಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತೆ. ಏಪ್ರಿಲ್ ಕೊನೆ ವಾರದಲ್ಲಿ ಚುನಾವಣೆ ಮುಗಿಯುತ್ತೆ, ಅಲ್ಲಿಯವರೆಗೆ ನಾವು ಕೆಲಸ ಮಾಡಬೇಕಿದೆ ಎಂದರು.
ಅಲ್ಲಿ ಬಿಜೆಪಿ ಬಂದ್ರೆ ರಾಜ್ಯದಲ್ಲೂ BJP ಇರುತ್ತೆ
ಈ ಹಿಂದೆ ಕೇವಲ ಒಂದು ಮತದ ಅಂತರದ ಸೋಲಾಗಿ ವಾಜಪೇಯಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದರು. ಬರುವ ಎರಡು ತಿಂಗಳ ಚುನಾವಣೆಯಲ್ಲಿ ಪ್ರಕ್ರಿಯೆ ಮುಗಿದು ಹೋಗಿರುತ್ತೆ. ದೇಶದಲ್ಲಿ ಬಿಜೆಪಿಗೆ 400 ಸೀಟು ಬಂದ್ರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬರುತ್ತೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ರಾಜ್ಯದಲ್ಲೂ ನಮ್ಮ ಸರ್ಕಾರವೇ ಇರುತ್ತೆ ಎನ್ನುವ ಮೂಲಕ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಸುಳಿವು ನೀಡಿದರು.
ಎಲ್ಲರೂ ಪ್ರಚಾರ ಮಾಡಬೇಕು ಅಂತಿಲ್ಲ
ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ಬರಲಿದೆ. ಎಲ್ಲರೂ ಪ್ರಚಾರ ಮಾಡಬೇಕು ಅಂತಿಲ್ಲ, ಹೊಸಬರಿಗೆ ಚುನಾವಣೆ, ಪ್ರಧಾನಿ ಮೋದಿ ಬಗ್ಗೆ ಹೇಳಬೇಕು. ಮತ್ತೊಮ್ಮೆ ಮೋದಿಗೆ ಅವಕಾಶ ಕೊಡಬೇಕೆಂಬ ಮನವಿ ಮಾಡಿ. ನಮ್ಮ ಕಾರ್ಯಕರ್ತರು ಜನರ ಬಳಿ ಹೋಗಿ ಮಾತನಾಡಿಸಿ, ನಮ್ಮ ಸರ್ಕಾರದ ಸಾಧನೆ ಹೇಳಬೇಕು ಎಂದರು.
ಒಂದೂವರೆ ಲಕ್ಷ ಲೀಡ್ ಸಿಗುತ್ತೆ
ಕಳೆದ ಬಾರಿ ಖಾನಾಪುರದಲ್ಲಿ ಒಂದು ಲಕ್ಷ ಲೀಡ್ ಸಿಕ್ಕಿತು. ಈಗ ವಾತಾವರಣ ಚೆನ್ನಾಗಿದೆ, ಒಂದೂವರೆ ಲಕ್ಷ ಲೀಡ್ ಸಿಗುತ್ತೆ ಅಂತ ಭರವಸೆ ಇದೆ. ದಕ್ಷಿಣ ಭಾರತದಲ್ಲಿ ಇಷ್ಟೊಂದು ಲೀಡ್ನಲ್ಲಿ ಗೆದ್ದಿದ್ದು ರಿಕಾರ್ಡ್ ಆಗಿತ್ತು, ಈಗ ಹೊಸ ರಿಕಾರ್ಡ್ ಮಾಡಬೇಕಿದೆ ಎಂದು ಅನಂತಕುಮಾರ್ ಹೆಗಡೆ ಕರೆ ಕೊಟ್ಟರು.