ಬೆಂಗಳೂರು : ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ಕ್ಯಾನ್ಸರ್ ದೃಢಪಟ್ಟಿರುವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಆದಿತ್ಯ ಎಲ್-1 ಉಡಾವಣೆಯ ದಿನದಂದೇ ನನಗೆ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಗೊತ್ತಾಗಿತ್ತು ಎಂದು ಸೋಮನಾಥ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಚಂದ್ರಯಾನ-3 ಮಿಷನ್ ಉಡಾವಣೆಯ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದ್ದವು. ಆ ಸಮಯದಲ್ಲಿ ನನಗೆ ರೋಗದ ಬಗ್ಗೆ ಸ್ಪಷ್ಟ ತಿಳುವಳಿಕೆ ಇರಲಿಲ್ಲ. ಬಳಿಕ ಆದಿತ್ಯ ಎಲ್-1 ಉಡಾವಣೆ ವೇಳೆಯಲ್ಲಿ ಕ್ಯಾನ್ಸರ್ ಇರುವ ವಿಷಯ ತಿಳಿಯಿತು. ಈ ಸುದ್ದಿ ತಿಳಿದ ಕುಟುಂಬದವರು ಹಾಗೂ ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ.
ನಾನು ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್ಗೆ ಒಳಗಾಗುತ್ತೇನೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ನನ್ನ ಕರ್ತವ್ಯವನ್ನು ಪುನರಾರಂಭಿಸಿದ್ದೇನೆ ಎಂದು ಸೋಮನಾಥ್ ತಿಳಿಸಿದ್ದಾರೆ.
ಚೆನ್ನೈ ಆಸ್ಪತ್ರಯಲ್ಲಿ ಶಸ್ತ್ರಚಿಕಿತ್ಸೆ
ಕ್ಯಾನ್ಸರ್ ಇರುವುದು ದೃಢಪಡುತ್ತಿದ್ದಂತೆ ಸೋಮನಾಥ್ ಅವರು ಚಿಕಿತ್ಸೆಗೆ ಚೆನ್ನೈಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಕಿಮೊಥೆರಪಿ ಮಾಡಲಾಯಿತು. ನಾಲ್ಕು ದಿನ ಆಸ್ಪತ್ರೆಯಲ್ಲಿ ಕಳೆದಿದ್ದರು. ನಂತರ ಮತ್ತೆ ಕರ್ತವ್ಯಕ್ಕೆ ಹಾಜರಾದರು. 5ನೇ ದಿನದಿಂದ ಯಾವುದೇ ನೋವು ಇಲ್ಲದೆ ಕೆಲಸ ಮಾಡಿದರು.