ಬೆಂಗಳೂರು : ಜಾತಿಗಣತಿ ವರದಿಗೆ ಯಾರ ವಿರೋಧವೂ ಇಲ್ಲ. ಯಾರೂ ವಿರೋಧ ಮಾಡಿಲ್ಲ ಎಂದು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಜಾತಿ ಎಷ್ಟಿದೆ ಅಂತ ಪ್ಯಾಕ್ಟ್ ಬಂದಿದೆ ಅಷ್ಟೇ. ಎಷ್ಟಿದೆ ಅಷ್ಟು ಸತ್ಯಾನೇ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿರೋಧ ವಿಚಾರವನ್ನು ನೋಡಿಲ್ಲ. ನಮ್ಮ ನಾಯಕರು ರಾಹುಲ್ ಗಾಂಧಿ ಅವರು. ದೇಶಾದ್ಯಂತ ಜಾತಿಗಣತಿ ಜಾರಿ ಮಾಡುತ್ತೇವೆ ಅಂದಿದ್ದಾರೆ. ಕರ್ನಾಟಕ ದೇಶದಲ್ಲೇ ಇರೋದು ಅಲ್ವಾ? ಎಂದು ಪ್ರಶ್ನೆ ಮಾಡಿದರು.
ರಾಜಕೀಯ ಮಾಡಲು ಹೋಗಬೇಡಿ
ಪಶು ಆಸ್ಪತ್ರೆ ಜಾಗದ ಹಸ್ತಾಂತರ ವಿಚಾರವಾಗಿ ಮಾತನಾಡಿ, ಗೂಡ್ ಶೆಡ್ ರಸ್ತೆಯಲ್ಲಿರುವ ಆ ಜಾಗ ಬಹಳ ವರ್ಷದಿಂದ ಯೂಸ್ ಆಗ್ತಿರಲಿಲ್ಲ. ಬಳಕೆ ಆಗ್ತಿಲ್ಲ ಅಂತ ಶಿಕ್ಷಣ ಉದ್ದೇಶಕ್ಕಾಗಿ ಪಡೆದಿದ್ದೇವೆ. ಶಿಕ್ಷಣದ ಉದ್ದೇಶದಿಂದ ಪಡೆದಿದ್ದೇವೆ. ಚಾಮರಾಜಪೇಟೆಯಲ್ಲಿ ಬಿಬಿಎಂಪಿ, ವಕ್ಘ್ ಆಸ್ತಿಯಿಲ್ಲ. ಅದಕ್ಕೆ ಈ ಜಾಗವನ್ನು ತೆಗೆದುಕೊಂಡಿದ್ದೇವೆ. ಶಿಕ್ಷಣದ ಉದ್ದೇಶಕ್ಕೆ ಪಡೆದಿದ್ದು, ರಾಜಕೀಯ ಮಾಡಲು ಹೋಗಬೇಡಿ ಎಂದು ಹೇಳಿದರು.
ದೇಶದ್ರೋಹಿಗೆ ಗಲ್ಲು ಶಿಕ್ಷೆಯಾಗಬೇಕು
ಎಫ್ಎಸ್ಎಲ್ ವರದಿ ವಿಚಾರವಾಗಿ ಮಾತನಾಡಿ, ಪ್ರಕರಣವನ್ನು ತನಿಖೆಗೆ ಕೊಟ್ಟಿದ್ದೇವೆ ವರದಿ ಇನ್ನು ಬಂದಿಲ್ಲ. ಸತ್ಯ ಹೊರಗೆ ಬರಲೇಬೇಕು. ಪಾಕಿಸ್ತಾನ್ ಜಿಂದಾಬಾದ್ ಎಂದು ಯಾರಾದರೂ ಕೂಗಿದ್ರೆ ಅವನು ದೇಶದ್ರೋಹಿ. ಆತನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.