ಬಳ್ಳಾರಿ : ರಾಜ್ಯ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ ಮಾಧ್ಯಮಗಳ ಮೇಲೆ ನಟ ಯಶ್ ಗರಂ ಆಗಿದ್ದಾರೆ. ನನಗೆ ರಾಜಕೀಯ ಇಂಟ್ರೆಸ್ಟ್ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಟ ಯಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಳಿಕ, ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಈ ವೇಳೆ ಮಂಡ್ಯ ಲೋಕಸಭಾ ಚುನಾವಣೆಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಲು ಮುಂದಾದ ಪತ್ರಕರ್ತರ ಮೇಲೆ ಯಶ್ ಕೊಂಚ ರಾಂಗ್ ಆದರು. ‘ನಿನಗೇನಾದರೂ ಬುದ್ಧಿ ಇದೆಯೇನಯ್ಯ..? ರಾಜಕೀಯದ ಬಗ್ಗೆ ಪ್ರಶ್ನೆ ಕೇಳುವ ಜಾಗ ಇದಾ..? ಹಿಂಗೆಲ್ಲ ಮಾಡಬಾರದು’ ಎಂದು ಹೇಳಿದ್ದಾರೆ.
ನೀವು ರಾಜಕೀಯ ಸೇರುತ್ತೀರಾ? ಎಂಬ ಪ್ರಶ್ನೆಗೆ, ‘ನನಗೆ ರಾಜಕೀಯ ಇಷ್ಟ ಇಲ್ಲ, ಸದ್ಯಕ್ಕೆ ರಾಜಕೀಯದ ಮಾತು ಬೇಡ’ ಎಂದು ಯಶ್ ತಿಳಿಸಿದ್ದಾರೆ.
ನಾನು ಅವತ್ತೇ ಹೇಳಿದ್ದೆ, ಅದಕ್ಕೆ ಬಂದಿರುವೆ
ಬಳ್ಳಾರಿಯ ಕೊರ್ರಪಾಟಿ ಸಾಯಿ ಅವರು ನನಗೆ ಆತ್ಮೀಯರು. ಅವರು ತುಂಬಾ ದೈವ ಭಕ್ತರು. ಕೆಜಿಎಫ್ ಚಿತ್ರದ ಡಿಸ್ಟ್ರಿಬ್ಯೂಟ್ ಮಾಡಿದ್ರು. ಕೆಜಿಎಫ್ ಯಶಸ್ಸಿನಲ್ಲಿ ಸಾಯಿ ಅವರ ಪಾತ್ರ ಬಹಳ ಮುಖ್ಯವಾಗಿದೆ. ದೇವಸ್ಥಾನ ಕಟ್ಟಲು ಪ್ರಾರಂಭ ಮಾಡುವ ಮುಂಚೆಯೇ ಉದ್ಘಾಟನೆಗೆ ರಬೇಕು ಎಂದು ಹೇಳಿದ್ರು. ನಾನು ಅವತ್ತೇ ಹೇಳಿದ್ದೆ, ದೇವಸ್ಥಾನ ಉದ್ಘಾಟನೆಗೆ ಬರುವೆ ಅಂತ. ಹೀಗಾಗಿ ಇಂದು ಬಂದಿರುವೆ ಎಂದು ಹೇಳಿದ್ದಾರೆ.