ಧಾರವಾಡ : ಇಂದಿರಾ ಗಾಂಧಿಯಂತವರನ್ನೇ ಜನ ಮನೆಗೆ ಕಳುಹಿಸಿದ್ದಾರೆ. ಈಗ ಕಾಂಗ್ರೆಸ್ಗೂ ಜನ ಬುದ್ಧಿ ಕಲಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ಬಲಾಢ್ಯ ಇದ್ದರು. ಭಗವಾ ಧ್ವಜ ಒಂದಿಂಚು ಜಾಗದಲ್ಲಿ ಹಾರಲು ಬಿಡುವುದಿಲ್ಲ ಎಂದಿದ್ದರು. ಅವರಿಗೆ ಜನ ಬುದ್ಧಿ ಕಲಿಸಿದ್ದರು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂ, ಮಠ, ಮಂದಿರ, ಸನಾತನ ಧರ್ಮ ಮುಗಿಸುತ್ತೇವೆ ಎಂದಿದ್ದರು. ಅವರ ಡಿಎಂಕೆ ಪಾಲುದಾರರು ಹೇಳಿದ್ದರು. ಅವರ ಅನೇಕ ಪಾಟ್ನರ್ಗಳು ಹೇಳಿಕೆ ಕೊಟ್ಟಿದ್ದಾರೆ. ಪ್ರಿಯಾಂಕ ಖರ್ಗೆ ಸಹ ಇದಕ್ಕೆ ಬೆಂಬಲಿಸಿದ್ದರು ಎಂದು ದೂರಿದರು.
ಇದೆಲ್ಲ ನಡೆಯಲು ಬಿಡವುದಿಲ್ಲ
ಹಿಂದೂ, ಮಠ, ಮಂದಿರ ಸಂಪತ್ತು ಕಡಿಮೆ ಮಾಡಲು ಹೊರಟಿದ್ದಾರೆ. ಈ ಮೂಲಕ ಸನಾತನ ಧರ್ಮದ ಶ್ರದ್ಧೆ ಹೆಚ್ಚಾಗದಂತೆ ತಡೆಯಲು ಹೊರಟಿದ್ದಾರೆ. ಸನಾತನ ಧರ್ಮ, ಹಿಂದುತ್ವ ವಿರೋಧಿಸುವ ತೀರ್ಮಾನದಿಂದ ಇದೆಲ್ಲ ಮಾಡಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಪ್ಲ್ಯಾನ್ ಇದೆ. ಆದರ, ಇದೆಲ್ಲ ನಡೆಯಲು ಬಿಡವುದಿಲ್ಲ ಎಂದು ಎಚ್ಚರಿಕೆ ನೀಡಿದರು.
HDK ಪ್ರಬುದ್ಧ ರಾಜಕೀಯ ನಾಯಕ
ಹಾಸನ ಮತ್ತು ಮಂಡ್ಯ ಎಂಪಿ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಎಲ್ಲವೂ ಈಗ ಚರ್ಚೆ ನಡೆಯುತ್ತಿದೆ. ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಅದಕ್ಕೆ ಸಿಗುತ್ತಿದೆ. ನಮ್ಮ ಪಕ್ಷದ ಮುಖಂಡರು, ನಾವೆಲ್ಲ ಸೇರಿ ಇತ್ಯರ್ಥ ಮಾಡುತ್ತೇವೆ. ಕುಮಾರಸ್ವಾಮಿಯವರು ಪ್ರಬುದ್ಧ ರಾಜಕೀಯ ನಾಯಕರು. ನಮ್ಮಲ್ಲಿಯೂ ಯಡಿಯೂರಪ್ಪರಂಥಹ ಹಿರಿಯರಿದ್ದಾರೆ. ನಾವೆಲ್ಲ ಸೇರಿ ಏನೇ ಸಮಸ್ಯೆಯಿದ್ದರೂ ಇತ್ಯರ್ಥಪಡಿಸುತ್ತೇವೆ. ಸಮಸ್ಯೆಯಾಗದಂತೆ ಬಗೆ ಹರಿಸುತ್ತೇವೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.