ಬೆಂಗಳೂರು : ಸಿನಿಮಾ ಮಾಡೋದಾದ್ರೆ ದೊಡ್ಡ ಮನೆಗೆ ಬಂದು ಮಾಡಿ. ಅದರಲ್ಲಿ ಒಂದು ತೂಕ ಇರುತ್ತೆ ಅಂತ ಹೇಳುತ್ತಿದ್ದರು. ಬಟ್ ನಮಗೆ ಈಗ ಅನುಭವವಾಗುತ್ತಿದೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅವರು ಹಾಕಿದ ಆಲದ ಮರ ಅಲ್ವಾ..? ನಾವೆಲ್ಲ ಯಾವುದೋ ಮೂಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದೇವೆ ಎಂದು ತಿಳಿಸಿದರು.
ನಟ ದರ್ಶನ್ ಮಹಿಳೆಯರ ಬಗ್ಗೆ ಪದ ಬಳಕೆ ವಿಚಾರವಾಗಿ ಮಾತನಾಡಿ, ಅದನ್ನು ನಾನು ನೋಡಿದ್ದೇನೆ. ಆ ರೀತಿ ಪದ ಬಳಕೆ ತಪ್ಪು, ಅದು ತಪ್ಪು ಸರ್. ಮಹಿಳೆಯರಿಗೆ ತೊಂದರೆ ಆಗುವ ರೀತಿಯಲ್ಲಿ ಏನೋ ಮಾತನಾಡಿದ್ದಾರಂತೆ. ಹೀಗಾಗಿ, ಪ್ರತಿಭಟನೆ ಮಾಡಿದ್ದಾರೆ. ಯಾಕೆ ಈ ವಿವಾದವಾಯ್ತು ನಮಗೆ ಏನು ಗೊತ್ತಿಲ್ಲ ಸರ್. ಎಲ್ಲ ಹೊಟ್ಟೆ ತುಂಬಿದವರು, ನಾವು ಹಸಿದವರು ಎಂದು ಹೇಳಿದರು.
ದೇಹ ತೂಕವಿದ್ದರೆ ಸಾಲದು, ಮಾತು ತೂಕವಿರಬೇಕು
ಸಮಸ್ಯೆಗಳು ಎಲ್ಲ ಕಡೆ ಬರುತ್ತೆ. ಬಟ್ ಅದನ್ನು ನಿಭಾಯಿಸುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾನು ಅವಗಲೇ ಹೇಳಿದ್ದೇನೆ, ದೇಹ ತೂಕ ವಿದ್ದರೆ ಸಾಲದು ಮಾತು ತೂಕವಿರಬೇಕು. ನಾನು ತಪ್ಪು ಮಾಡಿದ್ರು ತಪ್ಪೇ, ಯಾರು ತಪ್ಪು ಮಾಡಿದ್ರು ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೇಜ್ ಕೊಡಬೇಕು. ಈ ಕಂಟ್ರಾವರ್ಸಿಯಿಂದ ಮೆಸೇಜ್ ಕೊಡುವಂತದ್ದೇನು ಇಲ್ಲ ಎಂದು ಉಮಾಪತಿ ಶ್ರೀನಿವಾಸ್ ತಿಳಿಸಿದರು.